ವಿಟ್ಲ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ರೇಷ್ಮೆ ಕೃಷಿಗೆ ಸೂಕ್ತ ವಾಗಿದ್ದು ಪೂರಕವಾಗಿ ರಾಜ್ಯ ಸರ್ಕಾರ ಸರ್ವ ರೀತಿಯ ಸಹಕಾರ ನೀಡಲಿದೆ. ಈ ಜಿಲ್ಲೆಗಳ ಕೃಷಿಕರ ಮನವೊಲಿಸಿ ರೇಷ್ಮೆ ಕೃಷಿಗೆ ಉತ್ತೇಜಿಸಲಾಗುವುದು ಎಂದು ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಹೇಳಿದರು.
ಅವರು ಬುಧವಾರ ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ದ.ಕ. ಜಿಲ್ಲಾ ಪಂಚಾಯತಿ ರೇಷ್ಮೆ ಇಲಾಖೆ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ದ.ಕ. ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು.ರಾಜ್ಯದ ಎಲ್ಲಾ ಜಿಲ್ಲೆಗಳಿಗೂ
ರೇಷ್ಮೆ ಕೃಷಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಕೃಷಿ ಆಸಕ್ತ ರೈತರಿಗೆ ರೇಷ್ಮೆ ಸಾಕಾಣಿಕೆ ಶೆಡ್ ನಿರ್ಮಿಸಲು ಶೇಕಡಾ 70 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಮೈಸೂರಿನಲ್ಲಿ ಹೊಸ ಖರೀದಿ ಘಟಕ ಸ್ಥಾಪಿಸಲಾಗುವುದು. ಇಲಾಖೆಯಿಂದ ರೈತರಿಗೆ ಕೃಷಿ ತರಬೇತಿ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಜಿಲ್ಲೆಯಲ್ಲಿ 30 ವರ್ಷದ ಹಿಂದೆ ಶೇ.70ರಷ್ಟು ರೇಷ್ಮೆ ಕೃಷಿಯಿತ್ತು. ಅಡಿಕೆ ಬೆಳೆಗೆ ಪರ್ಯಾಯವಾಗಿ ರೇಷ್ಮೆಯನ್ನು ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು.
ರೇಷ್ಮೆ ಇಲಾಖಾ ಮೈಸೂರು ಜಂಟಿ ನಿರ್ದೇಶಕಿ ಪ್ರತಿಭಾ ಬಿ.ಆರ್ ಮಾತನಾಡಿ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ರೇಷ್ಮೆ ಕೃಷಿಕರು ಮುಂದೆ ಬರಬೇಕಾಗಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ರೇಷ್ಮೆ ಕೃಷಿ ಮಾಡಿ ಸ್ವಾವಲಂಬಿ ಬದುಕು ಸಾಗಿಸಬಹುದು. ಸಮಗ್ರ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಘಟಕ ನಿರ್ಮಾಣ ಮಾಡುವವರಿಗೆ ಇಲಾಖೆಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ ಮುರುವ ಮಹಾಬಲ ಭಟ್, ರೇಷ್ಮೆ ಕೃಷಿಯ ಅನುಭವಿ ಮಮತಾ ರೈ ದೇವಸ್ಯ, ಮಿಶ್ರ ಕೃಷಿಕ ನವೀನ್ ಚಾಕಬಾಯ್ ಸುಳ್ಯ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಸುರೇಶ್ ಶೆಟ್ಟಿ, ಸುದ್ದಿ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ಯು.ಪಿ ಶಿವಾನಂದ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅರುಣ್ಕುಮಾರ್ ಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕ ಎಂ. ಪ್ರಸಾದ್ ಶೆಟ್ಟಿ, ಪ್ರೀತಮ್ ಸಿಕ್ವೇರಾ ಉಪಸ್ಥಿತರಿದ್ದರು.
ಸುಮಿತ್ ಮಸ್ಕರೇನ್ಹಿಯಸ್ ಸ್ವಾಗತಿಸಿದರು. ನಾಗರಾಜ ಬನ್ನೂರು ವಂದಿಸಿದರು. ಮೋಹಿನಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.