ಮಂಗಳೂರು:ಮುಸ್ಲಿಂ ಮಹಿಳೆಯರು ಇತಿಹಾಸದಲ್ಲಿ ಹಲವು ಸಾಧನೆಗಳಲ್ಲಿ ರಾಜ್ಯ ದೇಶದಲ್ಲೇ ಅಮೂಲಾಗ್ರವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಖ್ಯಾತ ಸಾಹಿತಿ ಡಾ. ಶರೀಫಾ ಕೆ. ನಗರದ ಪುರಭವನದಲ್ಲಿ ಇಂದು ಆಯೋಜಿಸಿದ್ದ ಅನುಪಮ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವಿಶೇಷ ಸಂಚಿಕೆಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು .
ನಮ್ಮ ಕಣ್ಣ ಮುಂದೆಯೇ ಅದೆಷ್ಟೋ ಪತ್ರಿಕೆಗಳು ನೆಲಕಚ್ಚಿರುವುದನ್ನು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಮನೆಯಿಂದ ಹೊರಬರಲು ಅವಕಾಶ ವಿರಳವಾಗಿತ್ತು ಕಾಲಘಟ್ಟದಲ್ಲಿ, ಹಿಜಾಬ್ ಧರಿಸಿದ ಮಹಿಳೆಯ ನೇತೃತ್ವದಲ್ಲಿ ಅನೇಕ ಎಡರು-ತೊಡರುಗಳ ನಡುವೆ ಅನುಪಮ ಮಾಸಿಕ 25 ವರ್ಷಗಳನ್ನು ಪೂರೈಸಿರುವುದು ನಿಜಕ್ಕೂ ಪ್ರಶಂಸನಾರ್ಹ. ಪತ್ರಿಕೆಯು ನೈತಿಕತೆಯನ್ನು ಅನುಸರಿಸಿಕೊಂಡು ಅಕ್ಷರ ಬಳಕೆಯ ಗೌರವವನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ಅವರು ಬಣ್ಣಿಸಿದರು.
ಪತ್ರಕರ್ತೆ ಗೌರಿ ಹಾಗೂ ಬಿಲ್ಕಿಸ್ ಬಾನು ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯನ್ನು ಉಲ್ಲೇಖಿಸಿದ ಡಾ. ಶರೀಫಾ, “ನಮ್ಮ ಹೋರಾಟಗಳು ಏಕೆ ಹೀಗಾಗುತ್ತಿವೆ?” ಎಂದು ಯೋಚಿಸಿದಾಗ ಆತಂಕವಾಗುತ್ತದೆ ಎಂದರು. ಕರಾವಳಿಯಲ್ಲಿ ಹಿಜಾಬ್ ಪ್ರಕರಣದಿಂದಾಗಿ ಹಲವು ಮಹಿಳೆಯರ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ. ಕೋಮು ದ್ವೇಷದ ಭಾಷಣ ಮಾಡಬಾರದು ಎಂಬ ಉದ್ದೇಶದಿಂದ ಮಸೂದೆ ತರಲು ಮುಂದಾದರೆ ಅದನ್ನು ವಿರೋಧಿಸುವ ಕೋಮುವಾದಿಗಳ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಎಸಿಪಿ ನಜ್ಞಾಫಾರೂಕಿ , ಮಾಜಿ ಶಾಸಕಿ ಹಾಗೂ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಬೆಥನಿ ಸೇಂಟ್ ತೆರೆಸಾ ಕಾಲೇಜಿನ ಪ್ರಾಂಶುಪಾಲರಾದ ಭ. ಲೂರ್ಡ್ಸ್, ಆಪ್ತ ಸಮಾಲೋಚಕಿ ಹಾಗೂ ತರಬೇತುದಾರರಾದ ಡಾ. ರುಕ್ಸಾನ ,ಅನುಪಮ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿದರು. ಸಮೀನಾ ಉಪ್ಪಿನಂಗಡಿ ವಂದಿಸಿದರು. ಅಸ್ಮತ್ ವಗ್ಗ ಹಾಗೂ ಲುಬ್ಬಾ ಝಕಿಯ್ಯ ಕಾರ್ಯಕ್ರಮ ನಿರೂಪಿಸಿದರು.