ಮಂಗಳೂರು,: ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಆಟೋ ರಿಕ್ಷಾ ಚಾಲಕರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಂಧನ ಬೆಲೆ ಏರಿಕೆಯೊಂದಿಗೆ ವಾಹನಗಳ ನಿರ್ವಹಣೆ, ಬಿಡಿಭಾಗಗಳ ವೆಚ್ಚ, ವಿಮೆ, ಪರವಾನಗಿ ಶುಲ್ಕ ಸೇರಿದಂತೆ ಎಲ್ಲಾ ಖರ್ಚುಗಳು ಗಣನೀಯವಾಗಿ ಹೆಚ್ಚಾಗಿವೆ. ಆದರೆ ಹಲವು ವರ್ಷಗಳಿಂದ ಮಂಗಳೂರಿನ ಆಟೋ ರಿಕ್ಷಾ ದರವನ್ನು ಪರಿಷ್ಕರಿಸದಿರುವುದರಿಂದ ಚಾಲಕರು ತಮ್ಮ ಕುಟುಂಬದ ನಿರ್ವಹಣೆಯನ್ನೇ ಕಷ್ಟದಿಂದ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಆಟೋ ಚಾಲಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ತಕ್ಷಣವೇ ಆಟೋ ದರ ಪರಿಷ್ಕರಿಸಿ ಕನಿಷ್ಠ ಪ್ರಯಾಣ ದರವನ್ನು ₹50 ಹಾಗೂ ನಂತರ ಪ್ರತಿ ಕಿಲೋಮೀಟರ್ಗೆ ₹30 ನಿಗದಿಪಡಿಸಬೇಕು ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ಸರ್ಕಾರ ಮತ್ತು ಜಿಲ್ಲಾಡಳಿತವು ಆಟೋ ಚಾಲಕರ ನ್ಯಾಯಯುತ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ದರ ಪರಿಷ್ಕರಣೆ ಮಾಡಿ ಸಾವಿರಾರು ಆಟೋ ಚಾಲಕರ ಜೀವನೋಪಾಯವನ್ನು ರಕ್ಷಿಸಬೇಕೆಂದು ಎಸ್.ಡಿ.ಟಿ.ಯು ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ ಪತ್ರಿಕಾ ಪ್ರಕಾಟನೆಯಲ್ಲಿ ತಿಳಿಸಿದ್ದಾರೆ.