ಮಂಗಳೂರು:ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಮಂಗಳೂರಿನ ಹಾಪ್ಕಾಮ್ಸ್ ಪ್ರಧಾನ ವ್ಯವಸ್ಥಾಪಕರು ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಕಾರ್ಯದರ್ಶಿಯಾಗಿದ್ದ ರವಿಚಂದ್ರ ಶೆಟ್ಟಿ ಅಶೋಕನಗರ ಅವರಿಗೆ ನಗರದ ಪತ್ತುಮುಡಿ ಸೌಧದಲ್ಲಿ ಭಾವಪೂರ್ಣ ನುಡಿನಮನ ಕಾರ್ಯಕ್ರಮ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಹಾಗೂ ಅದರ ವಿವಿಧ ಘಟಕಗಳ ಸರ್ವ ಸದಸ್ಯರ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಟಮಾತನಾಡಿದ ಕದ್ರಿ ನವನೀತ ಶೆಟ್ಟಿ, “ರವಿಚಂದ್ರ ಶೆಟ್ಟಿ ಅವರ ಅಕಾಲಿಕ ನಿಧನ ಎಲ್ಲರಿಗೂ ಆಘಾತ ತಂದಿದೆ. ತಿರುಪತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತ ದುಃಖಕರ. ದೈವಭಕ್ತರಾಗಿದ್ದ ಅವರು ಸಮಾಜಸೇವೆಯ ಜೊತೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮುದ್ರಯಾನ ಹಾಗೂ ಪಟ್ಲ ಸಂಭ್ರಮದಂತಹ ಕಾರ್ಯಕ್ರಮಗಳ ಯಶಸ್ಸಿನ ವೇಳೆಯಲ್ಲೇ ಇಂತಹ ಘಟನೆ ನಡೆದಿರುವುದು ನೋವಿನ ಸಂಗತಿ,” ಎಂದು ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, “ರವಿಚಂದ್ರ ಶೆಟ್ಟಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ಜೀವನಪರ್ಯಂತ ಕಾಡಲಿದೆ. ವಿದ್ಯಾರ್ಥಿ ವೇತನ ಸೇರಿದಂತೆ ಟ್ರಸ್ಟ್ನ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಅವರು ಅಪಾರ ಸಹಕಾರ ನೀಡಿದ್ದರು. ಗುರುಕ್ಷೇತ್ರ ದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವೈಕುಂಠ ದರ್ಶನ ಮಾಡಿ ಇಂದು ವೈಕುಂಠವನ್ನೇ ಸೇರಿದಂತಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಶಬರಿಮಲೆ ಯಾತ್ರಿಕರಿಗೆ ಅನ್ನದಾನ ಹಾಗೂ ಯಕ್ಷಗಾನ ಸೇವೆಯಂತಹ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಹುಟ್ಟು ಹಾಗೂ ಮರಣ ಅನಿವಾರ್ಯವಾದರೂ, ಇಷ್ಟು ಬೇಗ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ,” ಎಂದು ಭಾವುಕರಾದರು.

ಡಾ. ಪ್ರಭಾಕರ ಜೋಶಿ ಮಾತನಾಡಿ, “ರವಿಚಂದ್ರ ಶೆಟ್ಟಿ ಸಜ್ಜನಿಕೆ, ನಿಷ್ಕಲ್ಮಶ ವ್ಯಕ್ತಿತ್ವ ಮತ್ತು ಸೇವಾ ಮನೋಭಾವಕ್ಕೆ ಹೆಸರಾಗಿದ್ದರು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರು ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿದ್ದರು. ಅಪಘಾತದ ಸಂದರ್ಭದಲ್ಲಿಯೂ ಪಟ್ಲ ಭಾಗವತರ ಸಮಯೋಚಿತ ಕಾರ್ಯದಿಂದ ಇತರರ ಜೀವ ಉಳಿದಿರುವುದು ಗಮನಾರ್ಹ,” ಎಂದರು.
ಭುಜಬಲಿ ಧರ್ಮಸ್ಥಳ ಮಾತನಾಡಿ, “ಸಾವು ಯಾವ ಕ್ಷಣದಲ್ಲಾದರೂ ಸಂಭವಿಸಬಹುದು. ಅದು ಕೇವಲ ಒಂದು ಕಾರಣದ ಮೂಲಕ ಬರುತ್ತದೆ. ಸಮುದ್ರಯಾನದ ವೇಳೆ ಅವರೊಂದಿಗೆ ಕಳೆದ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯಲಿವೆ,” ಎಂದು ಹೇಳಿದರು.

ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, “ದೇವರ ದರ್ಶನಕ್ಕೆ ತೆರಳಿದವರು ದೇವರ ಪಾದವನ್ನೇ ಸೇರಿರುವುದು ದುಃಖಕರ. ದೇವರ ಮೇಲೆ ಅಪಾರ ಭಕ್ತಿ ಹಾಗೂ ನಂಬಿಕೆ ಹೊಂದಿದ್ದ ರವಿಚಂದ್ರ ಶೆಟ್ಟಿ ಅನೇಕ ಕುಟುಂಬಗಳಲ್ಲಿ ಭಕ್ತಿಯ ದೀಪ ಬೆಳಗಿಸಿದವರು. ಸಂಕಷ್ಟದಲ್ಲಿದ್ದವರಿಗೆ ನೆರವಾಗಿ, ಸದಾ ನಗುವಿನೊಂದಿಗೆ ಬದುಕಿದ ಅವರು ಎಲ್ಲರಿಗೂ ಆತ್ಮೀಯರಾಗಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟ,” ಎಂದು ಸಂತಾಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಾಲಚಂದ್ರ ಸರಪಾಡಿ, ತಾರನಾಥ ಶೆಟ್ಟಿ, ಲೀಲಾಧರ ಶೆಟ್ಟಿ ಕಟ್ಲ, ಗಿರೀಶ್ ಶೆಟ್ಟಿ ಕಟೀಲ್ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು, ಯಕ್ಷಗಾನ ಅಭಿಮಾನಿಗಳು ಹಾಗೂ ಗಣ್ಯರು ಭಾಗವಹಿಸಿದರು.

ಈ ವೇಳೆ ರವಿಚಂದ್ರ ಶೆಟ್ಟಿ ಅವರ ಸಮಾಜಮುಖಿ ಸೇವೆ, ಸಂಘಟನಾ ಚಟುವಟಿಕೆಗಳು ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಬೆಳವಣಿಗೆಯಲ್ಲಿ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು. ಅಲ್ಲದೆ, ಕುಟುಂಬಸ್ಥರಿಗೆ ಸಂತಾಪ ಸೂಚಿಸಲಾಯಿತು.

