ಬಂಟ್ವಾಳ: ಖಾಸಗಿ ಕಂಪೆನಿಯೊಂದರ ಕಾಮಗಾರಿಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಆಕ್ರೋಶ ವ್ಯಕ್ತವಾಗಿದ್ದಲ್ಲದೆ ಕಾರ್ಮಿಕರ ಜೊತೆ ವಾಗ್ವಾದ ನಡೆದಿರುವ ಘಟನೆ ಕೈಕಂಬದಲ್ಲಿ ನಡೆದಿದೆ.
ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಪೋಲೀಸ್ ಪಾಯಿಂಟ್ ನ ಪಕ್ಕ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗೇಲ್ ಗ್ಯಾಸ್ ಕಂಪೆನಿಯವರಿಂದ ಕಾಮಗಾರಿ ನಡೆಯುತಿದ್ದು, ರಸ್ತೆಬದಿ ಹಾಗೂ ರಸ್ತೆಗೂ ಕೆಸರು ಮಿಶ್ರಿತ ನೀರು ಹರಿದುಹೋಗಿದೆ.
ಇದರಿಂದ ವಾಹನಗಳು ಕೆಸರುಮಯವಾದರೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳು ಎದ್ದು ಬಿದ್ದು ಹೋಗುವಂತಾಗಿದೆ.
ಬಿಸಿಲು ಮಳೆಗೆ ಸ್ವಲ್ಪ ಮಟ್ಟಿಗೆ ರಕ್ಷಣೆಗೆ ಮಾಡಿರುವ ಪೋಲೀಸ್ ಪಾಯಿಂಟ್ ನ ಸುತ್ತಲೂ ಕೆಸರು ತುಂಬಿದ್ದು,ಪೋಲೀಸರಿಗೂ ಸಂಕಟವನ್ನು ತಂದುಕೊಟ್ಟಿದೆ. ಸಾರ್ವಜನಿಕರಿಗೆ ಈ ರೀತಿಯ ಸಂಕಷ್ಟ ಎದುರಾದ ಸಂದರ್ಭದಲ್ಲಿ ಕಂಪೆನಿ ಮೌನವಾಗಿರುವುದನ್ನು ಕಂಡು ಸಾರ್ವಜನಿಕರು ಅಕ್ರೋಶಭರಿತರಾಗಿ ಕಾರ್ಮಿಕರ ಜೊತೆ ವಾಗ್ವಾದ ಮಾಡಿದ್ದಾರೆ ಎಂದು ಹೇಳಲಾಗಿದೆ.