ಮಂಗಳೂರು:ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಶರಧಿ ಪ್ರತಿಷ್ಠಾನವು ಜ.9, 10, 11ರಂದು ಹಮ್ಮಿಕೊಂಡ ರಾಷ್ಟ್ರ ಮಟ್ಟದ ಚಿತ್ರ-ಶಿಲ್ಪ- ಸಾಂಸ್ಕೃತಿಕ ಮೇಳ ‘ಕಲಾ ಪರ್ಬ’ ನಗರದ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
ಅವರು ಕದ್ರಿ ಪಾರ್ಕ್ ನಲ್ಲಿ ಕರೆದ ಪತ್ರಿಕಾಗೊಸ್ಟಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು , ಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜ.9ರಂದು ಸಂಜೆ 5:30ಕ್ಕೆ ಕಲಾ ಪರ್ಬ, ಮಳಿಗೆಗಳ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ ನಡೆಯಲಿದೆ ಎಂದರು.
ಜ.10, 11ರಂದು ಬೆಳಗ್ಗೆ 9ರಿಂದ ರಾತ್ರಿ 9:30ರವರಗೆ ಕಲಾ ಪರ್ಬ ನಡೆಯಲಿದೆ. ಆ ಪ್ರಯುಕ್ತ ಜ.10ರಂದು ಪೂ.11ರಿಂದ ಚಿತ್ರಕಲಾ ಸಂವಾದ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಕೊಳಲು ವಾದನ, ಸಾಧಕ ಕಲಾವಿದರಿಗೆ ಸನ್ಮಾನ, ಸಾನಿಧ್ಯ ವಿಶೇಷ ಮಕ್ಕಳಿಂದ ಯಕ್ಷಗಾನ, ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ 100ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದರು.ಜ.11ರಂದು ಪೂ.11ರಿಂದ ಶಿಲ್ಪಕಲಾ ಪ್ರಾತ್ಯಕ್ಷಿಕೆ, ಮೆಹಂದಿ ಬಿಡಿಸುವ ಸ್ಪರ್ಧೆ, ಬೀದಿ ನಾಟಕ, ಕಲಾ ಕಾರ್ಯಾ ಗಾರ, ಯಕ್ಷಗಾನ ನಡೆಯಲಿವೆ. ಅಪರಾಹ್ನ 3ಕ್ಕೆ ಬಿ.ಎಸ್. ದೇಸಾಯಿ ಶಿಷ್ಯ ವೃಂದದವರಿಂದ 5 ಅಡಿ ಎತ್ತರ, 20 ಅಡಿ ಉದ್ದದ ಪರಿಸರ ಜಾಗೃತಿಯ ಜಲವರ್ಣ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ, ಅಧ್ಯಕ್ಷ ಕೋಟಿಪ್ರಸಾದ್ ಆಳ್ವ ಉಪಾಧ್ಯಕ್ಷ ಶರತ್ ಹೊಳ್ಳ ಭರತ್ ರಾಜ್ ಬೈಕಾಡಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಜಿನೇಶ್ ಪ್ರಸಾದ್ ಉಪಸ್ಥಿತರಿದ್ದರು.