ಗುರುಪುರದಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ:ಜಾತಿ ಕಾರಣದಿಂದ ಮದುವೆ ನಿರಾಕರಣೆ.ಆರೋಪಿಯ ಬಂಧನ

ಮಂಗಳೂರು:ಗುರುಪುರದಲ್ಲಿ ಯುವತಿ ಆತ್ಮಹತ್ಯೆಗೆ ಜಾತಿ ಕಾರಣದಿಂದ ಮದುವೆ ನಿರಾಕರಣೆ, ನಿರ್ಲಕ್ಷ್ಯವೇ ಕಾರಣ ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಗಂಜಿಮಠ ಮಳಲಿ ನಿವಾಸಿ ಮನೋಜ್ ಅಲಿಯಾಸ್ ಮುರಳಿ ಪೂಜಾರಿ ಬಂಧಿತ ಆರೋಪಿ.

ಮೂಡಬಿದ್ರೆಯ ನವ್ಯಾ (20) ಸೋಮವಾರ ಸ್ನೇಹಿತೆಯನ್ನು ಭೇಟಿಯಾದ ಬಳಿಕ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ನವ್ಯಾ ಆತ್ಮಹತ್ಯೆಗೆ ಮೊದಲು ಬರೆದ ಡೆತ್ ನೋಟ್‌ನಲ್ಲಿ ಮನೋಜ್ ಹೆಸರನ್ನು ಉಲ್ಲೇಖಿಸಿದ್ದಾಳೆ. ನವ್ಯಾ ಕಳೆದ ಒಂದು ವರ್ಷದಿಂದ ಮೂಡಬಿದ್ರೆಯ ಜ್ಯುವೆಲ್ಲರಿ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಇನ್‌ಸ್ಟಾಗ್ರಾಂ ಮೂಲಕ ಮನೋಜ್ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಸಂಬಂಧ ಬೆಳೆದಿತ್ತು.

ನವ್ಯಾ ಮದುವೆಗೆ ಒತ್ತಾಯಿಸುತ್ತಿದ್ದರೆ, ಮನೋಜ್ ಜಾತಿ ಕಾರಣ ಮುಂದಿಟ್ಟುಕೊಂಡು ಮದುವೆಗೆ ಹಿಂದೇಟು ಹಾಕುತ್ತಿದ್ದನೆಂದು ಆರೋಪಿಸಲಾಗಿದೆ. ಮದುವೆಯ ವಿಚಾರವಾಗಿ ನವ್ಯಾಳನ್ನು ನಿರ್ಲಕ್ಷಿಸಿ ದೂರವಿಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನವ್ಯಾಳ ಮನೆಯವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಮನೋಜ್ “ನಿನ್ನೊಂದಿಗೆ ಮದುವೆಯಾಗುವುದಿಲ್ಲ” ಎಂದು ಹೇಳುವುದರ ಜೊತೆಗೆ ಆತ್ಮಹತ್ಯೆಗೆ ಪ್ರಚೋದಿಸುವ ರೀತಿಯ ಮಾತುಗಳನ್ನು ಆಡಿದ್ದಾನೆ ಎನ್ನಲಾಗಿದೆ. ಇದಲ್ಲದೆ, ಜಾತಿ ಕುರಿತು ಅವಮಾನಕಾರಿ ಮಾತುಗಳಿಂದ ನವ್ಯಾಳಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಮಾನಸಿಕ ಒತ್ತಡದಿಂದ ನವ್ಯಾ ಆತ್ಮಹತ್ಯೆಗೆ ಮುಂದಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!