ಮಂಗಳೂರು:ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಹುಟ್ಟಿಕೊಂಡ ಸಂಘಟನೆಯಾಗಿದ್ದು ವಿವಿಧ ಸಾಹಿತ್ಯ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ . 2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕ ಪೆಟ್ರಿಕ್ ಕಾಮಿಲ್ ಮೊರಾಸ್ ಇವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಗರದ ಬಜ್ಜೋಡಿಯ ಸಂದೇಶ ಪ್ರತಿಷ್ಠಾನದಲ್ಲಿ ಫೆಬ್ರವರಿ 07 ಸಂಜೆ 6.30 ಕ್ಕೆ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ರಿಚರ್ಡ್ ಮೊರಾಸ್ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ನವೆಂಬರ್ 17, 1945 ರಂದು ಜನಿಸಿದ ಪೆಟ್ರಿಕ್ ಕಾಮಿಲ್ ಮೊರಾಸ್, ಕೊಂಕಣಿ ಸಾಹಿತ್ಯ ಲೋಕದಲ್ಲಿ ಎಮ್. ಪೆಟ್ರಿಕ್ ಎಂದೇ ಖ್ಯಾತರು. ಬಾಲ್ಯದ ಕಷ್ಟಗಳ ನಡುವೆಯೂ ಅವರು ಕೊಂಕಣಿ ಸಾಹಿತ್ಯದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದರು. ಕುಟುಂಬದ ಆಸರೆಯಾಗಲು ಐದನೇ ತರಗತಿಯಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ ಇವರಿಗೆ ಜೆ. ಬಿ. ರಸ್ಕೀನ್ಹಾ ಅವರು ಮಾರ್ಗದರ್ಶಕರಾಗಿ ಲಭಿಸಿದರು. ರಸ್ಕೀನ್ಹಾ ಅವರು ಇವರಿಗೆ ಪುಸ್ತಕಗಳನ್ನು ನೀಡುವುದಲ್ಲದೆ, ಮನೆಮನೆಗೆ ಹೋಗಿ ಸಾಹಿತ್ಯದ ಪುಸ್ತಕಗಳನ್ನು ಮಾರಾಟ ಮಾಡಲು ಪ್ರೋತ್ಸಾಹಿಸಿದರು ಎಂದರು .
ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಪುಸ್ತಕ ಮಾರಾಟಗಾರರಾಗಿ ಮತ್ತು ‘ಕಾಣಿಕ್’ ಪತ್ರಿಕೆಯ ಸಹ-ಸಂಪಾದಕರಾಗಿ ವೃತ್ತಿಜೀವನ ಆರಂಭಿಸಿದ ಇವರು, ಮುಂದೆ 800ಕ್ಕೂ ಹೆಚ್ಚು ಸಣ್ಣ ಕಥೆಗಳು, 400ಕ್ಕೂ ಹೆಚ್ಚು ಲೇಖನಗಳು ಹಾಗೂ ಹತ್ತು ಕಾದಂಬರಿಗಳನ್ನು ರಚಿಸಿದ ಬಹುಮುಖ ಸಾಹಿತಿಯಾದರು. ತಮ್ಮದೇ ಆದ ‘ನಿತ್ಯಾದರ್ ಪ್ರಕಾಶನ’ದ ಮೂಲಕ ನಾಟಕಗಳು ಮತ್ತು ಪತ್ತೇದಾರಿ ಕಥೆಗಳು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿ, ಕೊಂಕಣಿ ಭಾಷೆಯ ಸೇವಕರಾಗಿ ಸೇವೆ ಸಲ್ಲಿಸಿದರು. ಈ ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದರು .
ಈಗಾಗಲೇ ಇವರ ಅಪಾರ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಎಂ. ಪ್ಯಾಟ್ರಿಕ್ ಅವರಿಗೆ ‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ – 2026’ ಲಭಿಸಿವೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ಶಾಂತಿಯ ಸದಸ್ಯರಾದ ಡೊಲ್ಫಿ ಎಫ್. ಲೋಬೊ , ಜೆ. ಎಫ್. ಡಿಸೋಜಾ ಸಹಿತ ಮತ್ತಿತರರು ಉಪಸ್ಥಿತರಿದ್ದರು .