ಮಂಗಳೂರು : ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಸಹಯೋಗದೊಂದಿಗೆ ಸಮಾಜಸೇವೆಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಖ್ಯಾತ ಸಮಾಜಸೇವಕ ಮತ್ತು ಮುಳುಗು ತಜ್ಞ ಈಶ್ವರ ಮಲ್ಪೆ ಇವರಿಗೆ ಪ್ರಪ್ರಥಮ “ಲಯನ್ಸ್ ಅಶೋಕ ಸೇವಾ ರತ್ನ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮವು ಜನವರಿ 26 ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್ ಬಳಿಯಿರುವ ಅಶೋಕ ನಗರದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಲಿದೆ ಎಂದು ಲಯನ್.ಡಾ|ನವೀನ್ ಶೆಟ್ಟಿಯವರು ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಪ್ರಶಸ್ತಿಯೊಂದಿಗೆ 25,000/- ನಗದು ಪುರಸ್ಕಾರವನ್ನು ಸಹ ನೀಡಿ ಸನ್ಮಾನಿಸಲಾಗುವುದು ಎಂದರು. ಈ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ್ ಶೆಣೈ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದರು .
ಶಿಕ್ಷಣ, ಆರೋಗ್ಯ, ಮಾನವೀಯ ಸೇವೆ ಹಾಗೂ ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಈಶ್ವರ್ ಮಲ್ಪೆ ಅವರ ನಿಸ್ವಾರ್ಥ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ. ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ಮುಂದಿನ ವರ್ಷಗಳಿಂದಲೂ ಪ್ರತಿವರ್ಷ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುವ ಮೂಲಕ ಸೇವಾ ಮನೋಭಾವವನ್ನು ಉತ್ತೇಜಿಸುವ ಸಂಕಲ್ಪವನ್ನು ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ ವಸಂತ ಶೆಟ್ಟಿ, ನಾರಾಯಣ ಎಂ, ಚರಣ್ ಆಳ್ವ,ನರೇಶ್ ಶೆಟ್ಟಿ,ನಿಖಿಲ್ ಶೆಟ್ಟಿ, ಪ್ರಶಾಂತ್ ಬಿ.ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.