ಟಿಪ್ಪು ಸುಲ್ತಾನ್ ಹೆಸರಲ್ಲಿ ಪ್ರಶಸ್ತಿ ನೀಡುವಂತೆ ಹಾಗು ಪಠ್ಯಪುಸ್ತಕಗಳಲ್ಲಿ ಟಿಪ್ಪು ಚರಿತ್ರೆ ಅಳವಡಿಸಿ, ಜನ್ಮದಿನ ಆಚರಣೆಗೆ ಕ್ರಮ ಕೈಗೊಳ್ಳಬೇಕು – ಮುಸ್ಲಿಂ ಲೀಗ್ ಒತ್ತಾಯ

ಮಂಗಳೂರು: ಟಿಪ್ಪು ಸುಲ್ತಾನ್ ಹೆಸರಲ್ಲಿ ಪ್ರಶಸ್ತಿ ನೀಡುವಂತೆ ಹಾಗು ಪಠ್ಯಪುಸ್ತಕಗಳಲ್ಲಿ ಟಿಪ್ಪು ಚರಿತ್ರೆ ಅಳವಡಿಸಿ, ಜನ್ಮದಿನ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಲೀಗ್ ಒತ್ತಾಯ ಮಾಡಿದೆ.

ಶಹೀದ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಶಾಲಾ ಕಾಲೇಜುಗಳ ಪುಸ್ತಕಗಳಲ್ಲಿ ಅವರ ಚರಿತ್ರೆಯನ್ನು ಅಳವಡಿಸಬೇಕು. ಸಾಹಸಿಗರಿಗೆ ಅವರ ಹೆಸರಲ್ಲಿ ಪ್ರಶಸ್ತಿಯನ್ನು ಕೊಡಬೇಕು ಎನ್ನುವುದು ಮುಸ್ಲಿಂ ಲೀಗಿನ ಬೇಡಿಕೆಯಾಗಿದೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದರೆ, ಬಿಜೆಪಿ ಹೇಗೆ ಪತನಗೊಂಡಿತೋ ಅದೇ ರೀತಿ ಕಾಂಗ್ರೆಸ್ ಸರ್ಕಾರ ಕೂಡ ಪತನಗೊಳ್ಳುವುದು ನಿಶ್ಚಿತ ಎಂದು ಮುಸ್ಲಿಂ ಲೀಗ್ ಎಚ್ಚರಿಕೆ ನೀಡಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಟಿಪ್ಪು ಸುಲ್ತಾನರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಸ್ಲಿಂ ಲೀಗ್ ಮುಖಂಡ ಹೆಚ್. ಇಸ್ಮಾಯಿಲ್, ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಯುದ್ಧ ಭೂಮಿಯಲ್ಲೇ ಮಡಿದು, ತನ್ನ ಮಕ್ಕಳನ್ನು ತ್ಯಾಗ ಮಾಡಿದ ಏಕೈಕ ರಾಜನೆಂದರೆ ಅದು ಶಹೀದ್ ಟಿಪ್ಪು ಸುಲ್ತಾನ್ ಮಾತ್ರ. ಟಿಪ್ಪು ಜ್ಞಾನಿಯೂ, ವಿಜ್ಞಾನಿಯೂ, ಧೈರ್ಯಶಾಲಿಯೂ, ಶೂರರೂ ಆಗಿದ್ದರು. ಕನ್ನಂಬಾಡಿ ಅಣೆಕಟ್ಟಿನ ರೂವಾರಿ, ರೇಷ್ಮೆ ಜನಕರು ಕ್ಷಿಪಣಿಯ ಹರೀಕಾರರು ಆಗಿದ್ದಾರೆ ಎಂದರು.

ಬಿಜೆಪಿಯ ಕೆಲವು ನಾಯಕರು ಈಗಲೂ ಟಿಪ್ಪು ಸುಲ್ತಾನ್ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತ ಇದ್ದಾರೆ. ಇದರ ಪರಿಣಾಮವಾಗಿಯೇ ಬಿಜೆಪಿ ಸರ್ಕಾರ ಪತನಗೊಂಡಿತು. ಬಿಜೆಪಿಗರು ಟಿಪ್ಪು ಸುಲ್ತಾನರನ್ನು ಬೇಡದ ಕೆಲಸಗಳಿಗೆ ಹೋಲಿಸುತ್ತಿದ್ದಾರೆ. ಸುಲ್ತಾನ ಹೊರತುಪಡಿಸಿ ಬೇರೆ ಯಾರ ಹೆಸರಲ್ಲಿಯೂ ದೇವಸ್ಥಾನಗಳಲ್ಲಿಯೂ ಸುಲ್ತಾನ್‌ಕಾ ಸಲಾಂ ಪೂಜೆ ಆಗ್ತಾ ಇಲ್ಲ. ಅನೇಕ ದೇವಸ್ಥಾನಗಳಿಗೆ ಅವರು ಕೊಡುಗೆ ನೀಡಿರುವುದೇ ಇದಕ್ಕೆ ಕಾರಣ. ಸಲಾಂ ಎನ್ನುವುದು ಅರಬ್ಬಿ ಪದವಾದರೂ ಆ ಪದದಲ್ಲಿ ಪೂಜೆ ನಡೆಯುತ್ತಾ ಇದೆ ಎಂದರೆ ಆ ರಾಜನಿಗೆ ಎಷ್ಟು ಗೌರವವಿತ್ತು ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪೂಜೆಯ ಕಾರಣಗಳ ಬಗ್ಗೆ ಬಿಜೆಪಿಯ ಯಾವ ನಾಯಕರೂ ಮಾತಾಡ್ತಾ ಇಲ್ಲ ಎಂದು ಟೀಕಿಸಿದರು.

ತಾನು ಮಡಿದು ತನ್ನ ಮಕ್ಕಳನ್ನು ತ್ಯಾಗ ಮಾಡಿದ ಕೀರ್ತಿ ಸುಲ್ತಾನರಿಗೆ ಮಾತ್ರ ಲಭಿಸುತ್ತದೆ. ಸುಲ್ತಾನರ ಖಡ್ಗವನ್ನು ಯು.ಬಿ. ಮಲ್ಯ ಅವರು ತಂದಿರುತ್ತಾರೆ. ಅವರ ವೇಷ ಭೂಷಣಗಳನ್ನು ಹಾಕಿ ನಾನೇ ಟಿಪ್ಪು ಸುಲ್ತಾನ್ ಎಂದು ಭಾಸವಾಗುತ್ತದೆ ಎಂದು ಯಡ್ಯೂರಪ್ಪ ಹೇಳಿ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಮರು ವರ್ಷ ಬಿಜೆಪಿಗರು ‘ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಅಂತ ಹೇಳಿದ ಮೇಲೆ ಯಡ್ಯೂರಪ್ಪ ಅಧಿಕಾರ ಕಳೆದುಕೊಂಡರು. ಬಿಜೆಪಿಗರೇ ಅವರನ್ನು ಹೇಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದೀರಿ? ಇದು ನಿಮಗೆ ಅವಮಾನ ಅಲ್ಲವೇ? ಎಂದು ಪ್ರಶ್ನಿಸಿದ ಅವರು, ಟಿಪ್ಪು ವಿರೋಧಿಸಿ ಸಿ.ಟಿ.ರವಿ ಚುನಾವಣೆಯಲ್ಲಿ ಸೋತರು. ಟಿಪ್ಪು ವಿರೋಧಿ ಪುಸ್ತಕ ಬರೆದ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಯಿತು. ಅದೇ ರೀತಿ ಕಾಂಗ್ರೆಸ್ ಕೂಡ ಸುಲ್ತಾನರನ್ನು ಕಡೆಗಣಿಸಿದರೆ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!