ಮಂಜೇಶ್ವರ: ಮರಳು ಮಾಫಿಯಾಗಳ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದವರು ಓಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೊಯಿಪ್ಪಾಡಿ ಬದ್ರಿಯಾ ನಗರದ ಕೆ.ಬೆಡ್ ತಹ್ವನೂನ್ ಹಾಗೂ ಜೊತೆಗಿದ್ದ ಜುನೈದ್ ಎಂಬಿ ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಎಸ್ಐ ಕೆ. ಶ್ರೀಜೇಶ್, ಎಎಸ್ಐ ಸುರೇಶ್, ಸಿಪಿಒ ಸಂದೀಪ್ ಎಂಬಿವರು ನಿನ್ನೆ ರಾತ್ರಿ ಪಟ್ರೋಲಿಂಗ್ ನಡೆಸುತ್ತಿರುವ ಮಧ್ಯೆ ಮೊಗ್ರಾಲ್ ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಮೊಗ್ರಾಲ್ ನೇಶನಲ್ ನಗರಕ್ಕೆ ತಲುಪಿತ್ತು. ಈ ಹೊತ್ತಿನಲ್ಲಿ ಮೊಗ್ರಾಲ್ ಭಾಗಕ್ಕೆ ಟಾಟಾ ಏಸ್ ವಾಹನ ಸಂಚರಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ನಿಲ್ಲಿಸುವಂತೆ ಸೂಚಿಸಿದರೂ ವಾಹನ ಮುಂದಕ್ಕೆ ಸಾಗಿದೆ. ಇದರಿಂದ ಬೆನ್ನಟ್ಟಿ ವಾಹನವನ್ನು ಮೊಗ್ರಾಲ್ ಪುತ್ತೂರಿನಲ್ಲಿ ತಡೆದು ನಿಲ್ಲಿಸಿದ್ದು ಈ ವೇಳೆ ಅದರಲ್ಲಿದ್ದ ಇಬ್ಬರು ಓಡಿ ಪರಾರಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನ ಹಾಗೂ ಮರಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.