ಕುಂಬಳೆ: ನಾಯಿಕ್ಕಾಪ್ಪಲ್ಲಿ ಯುವ ವಕೀಲೆಯ ಮನೆಗೆ ನಡೆದ ಭಾರೀ ಕಳ್ಳತನ ಪ್ರಕರಣದಲ್ಲಿ ಆರೋಪಿ ಪೊಲೀಸರಿಂದ ಬಂಧನ. ಜಿಲ್ಲೆಯಲ್ಲಿನ ದೇವಸ್ಥಾನ ಕಳ್ಳತನ ಪ್ರಕರಣಗಳ ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿದ್ದ ಕರ್ನಾಟಕ ಮೂಲದ ಕಲಂದರ್ ಇಬ್ರಾಹಿಂ (42)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.2024ರ ನವೆಂಬರ್ 4ರ ಮುಂಜಾನೆ ಮಾನ್ಯದಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಸುಮಾರು ₹6 ಲಕ್ಷ ಮೌಲ್ಯದ ಬೆಳ್ಳಿ ವಿಗ್ರಹ ಹಾಗೂ ರುದ್ರಾಕ್ಷ ಮಾಲೆಯನ್ನು ಕಳವು ಮಾಡಿದ ಪ್ರಕರಣ ಸೇರಿ, ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿನ ಒಟ್ಟು 25ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಕಲಂದರ್ ಇಬ್ರಾಹಿಂ ಆರೋಪಿ ಆಗಿದ್ದಾನೆ.
ಇತ್ತೀಚಿನ ಕುಂಬಳೆಯ ವಕೀಲೆ ಚೈತ್ರ ಅವರ ಮನೆಮಂದಿ ದೇವಸ್ಥಾನೋತ್ಸವಕ್ಕೆ ತೆರಳಿದ್ದ ಸಂದರ್ಭ, ಮನೆಯ ಹಿಂಬಾಗಿಲಿನ ಬೀಗವನ್ನು ಮುರಿದು ಕಳ್ಳ ಒಳನುಗ್ಗಿ ಮನೆಯಲ್ಲಿ ಕಳ್ಳತನ ನಡೆದಿದೆತ್ತು . ಒಟ್ಟು ₹31,67,000 ಮೌಲ್ಯದ ಚಿನ್ನಾಭರಣ ಹಾಗೂ ನಗದು ನಷ್ಟವಾಗಿದೆ. ಅಲಮಾರೆಯಲ್ಲಿ ಇರಿಸಿದ್ದ 29¾ ಪವನ್ ಚಿನ್ನಾಭರಣಗಳು, ₹25,000 ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ₹5,000 ನಗದು ಹಣ ಕಳವುಗೊಂಡಿವೆ.ಬಂಧನಕ್ಕೊಳಗಾದ ಕಲಂದರ್ ಇಬ್ರಾಹಿಂನನ್ನು ಪೊಲೀಸರು ಸವಿಸ್ತಾರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಕುಂಬಳೆಯ ಮನೆ ಕಳ್ಳತನಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಬಂಧನಕ್ಕೊಳಗಾದ ಆರೋಪಿಯನ್ನು ಕುಂಬಳೆ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಆರೋಪಿಯ ಚಲನವಲನ, ಕಳ್ಳತನದ ವಿಧಾನ ಹಾಗೂ ಸಮಯಕ್ರಮವನ್ನು ನಿಖರವಾಗಿ ಪತ್ತೆಹಚ್ಚಿ ಪೊಲೀಸರು ಬಲೆ ಬೀಸಿದ್ದು, ಅದರಲ್ಲಿ ಆರೋಪಿ ಸಿಲುಕಿದ್ದಾನೆ.
ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿದಾಗ ಆರೋಪಿಯ ಸಾನ್ನಿಧ್ಯ ದೃಢಪಟ್ಟಿದೆ ಎಂದು ತಿಳಿದುಬಂದಿದೆ.ಕಲಂದರ್ ಇಬ್ರಾಹಿಂ ಕಾಸರಗೋಡು ಮತ್ತು ಕರ್ನಾಟಕದಲ್ಲಿನ 25ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ನೆಲ್ಲಿಕಟ್ಟ ಶ್ರೀ ನಾರಾಯಣ ಗುರು ಮಂದಿರ, ಮಾನ್ಯ ಅಯ್ಯಪ್ಪ ಭಜನಾ ಮಂದಿರ, ಪೊಯಿನಾಚಿ ಅಯ್ಯಪ್ಪ ದೇವಸ್ಥಾನಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿಯೂ ಅವನ ಪಾತ್ರವನ್ನು ಪೊಲೀಸರು ಈಗಾಗಲೇ ಪತ್ತೆಹಚ್ಚಿದ್ದಾರೆ.
ಕುಂಬಳೆಯ ಮನೆ ಕಳ್ಳತನ ಸೇರಿ ಜಿಲ್ಲೆಯಲ್ಲಿ ನಡೆದ ಇತರೆ ಕಳ್ಳತನಗಳಲ್ಲಿ ಇನ್ನೂ ಹೆಚ್ಚಿನವರು ಭಾಗಿಯಾಗಿದ್ದಾರೆಯೇ ಎಂಬುದರ ಜೊತೆಗೆ, ಕಳವುಗೊಂಡ ಆಭರಣಗಳು ಹಾಗೂ ಇತರೆ ವಸ್ತುಗಳನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬುದನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಜಿಲ್ಲೆಯಲ್ಲಿ ನಿರಂತರವಾಗಿ ನಡೆದ ಕಳ್ಳತನಗಳ ಹಿಂದಿನ ಸಂಪರ್ಕವನ್ನು ಪತ್ತೆಹಚ್ಚಲು ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕೆಲ ವಾರಗಳ ಹಿಂದೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂದು ತರವಾಡು ಮನೆ ಕಳ್ಳತನಕ್ಕೂ ಆರೋಪಿಯ ಸಂಬಂಧವಿದೆಯೇ ಎಂಬುದರ ಕುರಿತು ಕೂಡ ಪರಿಶೀಲನೆ ನಡೆಯುತ್ತಿದೆ.