ಮಂಜೇಶ್ವರ : ಜನರ ಅಗತ್ಯತೆಗಳು, ಸ್ಥಳೀಯ ಅಭಿವೃದ್ಧಿ ಅವಕಾಶಗಳು ಹಾಗೂ ಭವಿಷ್ಯ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧೀನದಲ್ಲಿ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚಿಸಲಾಯಿತು. ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಗ್ರ ವರ್ಕಿಂಗ್ ಗ್ರೂಪ್ಗೆ ರೂಪು ನೀಡಲಾಯಿತು.
ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ, ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜನರ ಸಕ್ರಿಯ ಭಾಗವಹಿಸುವಿಕೆಯಿಂದ ಯೋಜನೆಗಳನ್ನು ಜಾರಿಗೊಳಿಸುವ ಸ್ಪಷ್ಟ ರೂಪರೇಖೆ ತಯಾರಿಸುವುದು ವರ್ಕಿಂಗ್ ಗ್ರೂಪ್ನ ಪ್ರಮುಖ ಗುರಿಯೆಂದು ತಿಳಿಸಲಾಯಿತು.
ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಪುಲ್ಲಾ ತಂಘಲ್ ಸಭೆಯನ್ನು ಉದ್ಘಾಟಿಸಿ ಅಭಿವೃದ್ಧಿ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯ ಅಗತ್ಯವಿದೆ ಎಂದು ಹೇಳಿದರು. ಉಪಾಧ್ಯಕ್ಷೆ ಕಮಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿಯ ಸದಸ್ಯರು, ಅಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು.