ಮಂಜೇಶ್ವರ: ಮಂಜೇಶ್ವರ ರೈಲ್ವೆ ಭಾಗದಲ್ಲಿರುವ ಚಕ್ರತೀರ್ಥದಿಂದ ಆರಂಭವಾಗಿ ಬಂಗ್ರ ಮಂಜೇಶ್ವರ ನದಿಗೆ ಸೇರುವ ಸುಮಾರು 7 ಕಿಲೋಮೀಟರ್ ಉದ್ದದ “ಸುರಮತೋಡು” ಕಾಲುವೆ ಮಂಜೇಶ್ವರ ಪ್ರದೇಶದ ಮೂಲಕ ಹರಿದು ಹೋಗುತ್ತದೆ. ಇದರಲ್ಲಿನ ಸುಮಾರು 1½ ಕಿಲೋಮೀಟರ್ ಭಾಗವು ದಕ್ಷಿಣ ರೈಲ್ವೇ ಅಧೀನದಲ್ಲಿರುವ ಮಂಜೇಶ್ವರ ರೈಲ್ವೇ ನಿಲ್ದಾಣದ ಹಿಂಭಾಗದ ರೈಲ್ವೆ ಆಸ್ತಿ ವ್ಯಾಪ್ತಿಗೆ ಒಳಪಟ್ಟಿದೆ.
ಕಳೆದ 50 ವರ್ಷಗಳಿಂದ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಹಾಗೂ ಸಿಲ್ಟ್ ಜಮೆಯಾಗಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಕೃತಕ ಪ್ರವಾಹ ಉಂಟಾಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಮನೆಮಠಗಳಿಗೆ ಹಾನಿಯೂ ಸಂಭವಿಸುತ್ತಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ನೂತನವಾಗಿ ಅಧಿಕಾರಕ್ಕೇರಿದ ಮಂಜೇಶ್ವರ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಕಾಲುವೆ ಡೀ-ಸಿಲ್ಟಿಂಗ್ ಹಾಗೂ ಶುದ್ಧೀಕರಣ ಕಾಮಗಾರಿಗೆ ಬುಧವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಮುಂದಿನ ಮಳೆಗಾಲದಲ್ಲಿ ಕೃತಕ ಪ್ರವಾಹ ಸಮಸ್ಯೆಗೆ ತಕ್ಕ ಮಟ್ಟಿನ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.