ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೈಮಾಸ್ಟ್ ಮತ್ತು ಮಿನಿ ಮಾಸ್ಕ್ ದೀಪಗಳ ನವೀಕರಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಶಾಸಕರ ನಿಧಿಯಿಂದ ಸ್ಥಾಪಿಸಲ್ಪಟ್ಟಿದ್ದ ಈ ದೀಪಗಳು ಸರಿಯಾದ ನಿರ್ವಹಣೆಯಿಲ್ಲದೆ ಕೇವಲ ‘ಪ್ರದರ್ಶನದ ವಸ್ತು’ಗಳಂತಾಗಿದ್ದವು. ಈಗ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾದ ಬಶೀರ್ ಕನಿಲ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ಸಮಸ್ಯೆಗಳಿಗೆ ಮುಕ್ತಿ ಸಿಗುವ ಲಕ್ಷಣ ಕಾಣಿಸುತ್ತಿದೆ.
’ಊಟಕ್ಕಿಲ್ಲದ ಉಪ್ಪಿನಕಾಯಿ’ಯಂತಾಗಿದ್ದ ದೀಪಗಳು
ಪಂಚಾಯತ್ ವ್ಯಾಪ್ತಿಯಲ್ಲಿ ಹೈಮಾಸ್ಟ್ ಹಾಗೂ ಮಿನಿ ಮಾಸ್ಕ್ ಸೇರಿ ಸುಮಾರು 30 ದೀಪಗಳನ್ನು ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಈ ಪೈಕಿ ಬಹುತೇಕ ದೀಪಗಳು ಕೆಟ್ಟು ಹೋಗಿದ್ದು, ರಾತ್ರಿಯಾಗುತ್ತಲೇ ಇಡೀ ಪರಿಸರ ಕತ್ತಲೆಯಲ್ಲಿ ಮುಳುಗುತ್ತಿತ್ತು.ಈ ಹಿಂದೆ ಅಧಿಕಾರದಲ್ಲಿದ್ದವರು ಈ ಬಗ್ಗೆ ಕಾಳಜಿ ವಹಿಸದ ಕಾರಣ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಗ್ರಾಮಸ್ಥರ ಆಕ್ರೋಶ ಮತ್ತು ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನೂತನ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು, ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ನಿಷ್ಕ್ರಿಯ ದೀಪಗಳ ನವೀಕರಣಕ್ಕೆ ಮುತುವರ್ಜಿ ವಹಿಸಿದ್ದಾರೆ.ಸುಮಾರು 30 ಲೈಟ್ಗಳ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಂತ್ರಿಕ ತಂಡದ ಮೂಲಕ ಪರಿಶೀಲನೆ ಮತ್ತು ಸಾಮಗ್ರಿ ಖರೀದಿ. ಕತ್ತಲಲ್ಲಿರುವ ಮಂಜೇಶ್ವರದ ಪ್ರಮುಖ ಜಂಕ್ಷನ್ಗಳಿಗೆ ಹೊಸ ಬೆಳಕು ನೀಡುವುದು ಇದರ ಮೂಲಗುರಿಯಾಗಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಈ ದೀಪಗಳು ಉಪಯೋಗಕ್ಕೆ ಬಾರದಿರುವುದು ವಿಷಾದನೀಯ. ಗ್ರಾಮಸ್ಥರ ಸುರಕ್ಷತೆ ಮತ್ತು ಸೌಕರ್ಯದ ದೃಷ್ಟಿಯಿಂದ ಆದಷ್ಟು ಬೇಗ ಎಲ್ಲಾ ದೀಪಗಳನ್ನು ಸರಿಪಡಿಸಲಾಗುವುದೆಂದು ಅಧ್ಯಕ್ಷರು ತಿಳಿಸಿದ್ದಾರೆ.ಈ ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇಷ್ಟು ದಿನಗಳ ಕತ್ತಲೆಗೆ ಕೊನೆಗೂ ಮುಕ್ತಿ ಸಿಗುವ ಭರವಸೆಯಲ್ಲಿದ್ದಾರೆ ಗ್ರಾಮಸ್ಥರು.