ಮಂಜೇಶ್ವರ : ಪವಿತ್ರ ರಂಜಾನ್ ತಿಂಗಳು ಕೇವಲ ಉಪವಾಸಕ್ಕಷ್ಟೇ ಸೀಮಿತವಲ್ಲ, ಅದು ದಾನ-ಧರ್ಮ ಹಾಗೂ ಪರಸ್ಪರ ಸಹಕಾರದ ಸಂಕೇತವೂ ಹೌದು ಎಂಬುದನ್ನು ಕುಂಜತ್ತೂರು ಹಾಗು ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಪವಿತ್ರ ಮಾಸದ ಹಿನ್ನೆಲೆಯಲ್ಲಿ ಸಮಾಜದ ದುರ್ಬಲ ವರ್ಗದವರ ಕಣ್ಣೀರು ಒರೆಸುವ ಮಹತ್ತರ ಉದ್ದೇಶದೊಂದಿಗೆ, ಶಾಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹಸಿದವರಿಗೆ ಅನ್ನ, ಬಟ್ಟೆ ಹಾಗೂ ಧಾರ್ಮಿಕ ಮಾರ್ಗದರ್ಶನದ ಹರಿಕಾರರಾಗಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿಗಳು ಶ್ರಮವಹಿಸಿ ಸಂಗ್ರಹಿಸಿದ ಹಾಗು ಸಿದ್ಧಪಡಿಸಲಾದ ದಿನಬಳಕೆಯ ಅಗತ್ಯ ದಿನಸಿ ಪದಾರ್ಥಗಳನ್ನೊಳಗೊಂಡ ಕಿಟ್ಗಳು, ಆಧ್ಯಾತ್ಮಿಕ ಚಿಂತನೆಗಾಗಿ ಪವಿತ್ರ ಖುರಾನ್ ಗ್ರಂಥದ ಪ್ರತಿಗಳು ಅತ್ಯಂತ ಅಗತ್ಯವಿರುವ ಕುಟುಂಬಗಳಿಗೆ ಆರ್ಥಿಕ ನೆರವು ಅರ್ಹ ಫಲಾನುಭವಿಗಳಿಗೆ ಅತ್ಯಂತ ಗೌರವಪೂರ್ವಕವಾಗಿ ವಿತರಿಸಲಾಯಿತು. ಶಿಕ್ಷಣ ಎಂದರೆ ಕೇವಲ ಪುಸ್ತಕದ ಜ್ಞಾನವಲ್ಲ, ಅದು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವುದು ಕೂಡ ಆಗಿದೆ. ನಮ್ಮ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲೇ ಇಂತಹ ಉದಾತ್ತ ಚಿಂತನೆ ಹೊಂದಿರುವುದು ಹೆಮ್ಮೆಯ ವಿಷಯ. ಎಂದು ಶಾಲಾ ಪ್ರಾಂಶುಪಾಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾನ ಮಾಡುವುದು ಕೇವಲ ಶ್ರೀಮಂತರ ಗುಣವಲ್ಲ, ಅದು ವಿಶಾಲ ಮನೋಭಾವದ ಸಂಕೇತ ಎಂಬುದನ್ನು ಈ ಪುಟ್ಟ ಮಕ್ಕಳು ಸಾಬೀತುಪಡಿಸಿದ್ದಾರೆ. ಶಾಲೆಯ ಈ ಮಾದರಿ ಕಾರ್ಯಕ್ರಮವು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಮಾಜದ ಇತರರಿಗೂ ಸ್ಫೂರ್ತಿಯಾಗಿದೆ.