ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಎಡರಂಗದ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅವರನ್ನು ಸಿಪಿಐಎಂ ಜಿಲ್ಲಾ ನೇತೃತ್ವ ಅಂತಿಮಗೊಳಿಸಿದೆ.
ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಷಾನವಾಸ್ ಪಾದೂರು ಅವರ ಹೆಸರು ಕೇಳಿಬಂದಿತ್ತಾದರೂ, ಕಾರ್ಯಕರ್ತರ ಆಕ್ಷೇಪ ಹಾಗೂ ಮತ ವಿಭಜನೆಯ ಭೀತಿಯಿಂದಾಗಿ ಪಕ್ಷವು ಸ್ಥಳೀಯ ನಾಯಕ ಜಯಾನಂದ ಅವರಿಗೆ ಮಣೆ ಹಾಕಿದೆ.
ಷಾನವಾಸ್ ಅವರ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಗೊಂಡು ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಹಾಗೂ ಕೆ.ಆರ್. ಜಯಾನಂದ ಸ್ಥಳೀಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಂತಾಗಿದೆ.
ಉಳಿದಂತೆ ಉದುಮದಲ್ಲಿ ಸಿ.ಎಚ್. ಕುಂಞಂಬು ಹಾಗೂ ತ್ರಿಕರಿಪುರದಲ್ಲಿ ವಿ.ಪಿ.ಪಿ. ಮುಸ್ತಫ ಎಡರಂಗದ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ಜಿಲ್ಲೆಯ ಚುನಾವಣಾ ಕಣ ರಂಗೇರಿದೆ.