ಕಾಸರಗೋಡು: ಮರು ಮದುವೆಗೆ ಬಯಸುತ್ತಿದ್ದ ವಿಧವೆ ಮಹಿಳೆಯರನ್ನು ಮದುವೆಯಾಗುವ ಭರವಸೆಯಿಂದ ಬಲೆಗೆ ಬೀಳಿಸಿ , ಅವರ ಜೊತೆ ಸುತ್ತಾಡಿ ಲೈಂಗಿಕವಾಗಿ ಬಳಸಿಕೊಂಡು ವಿಲಾಸಿ ಜೀವನ ನಡೆಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕಾಸರಗೋಡು ವನಿತಾ ಪೋಲೀಸರು ಬಂಧಿಸಿದ್ದಾರೆ. ಕೇರಳದ ತೃಶ್ಶೂರು ಜಿಲ್ಲೆಯ ಕೈಪಮಂಗಲಂ ಕೂರಿಕಳ ನಿವಾಸಿ ಶೋಭಿ ಯಾನೆ ಪ್ರಶೋಬ್ (36)ಬಂಧಿತ ವ್ಯಕ್ತಿಯಾಗಿದ್ದಾನೆ.
ಕಾಸರಗೋಡು ವನಿತಾ ಪೋಲೀಸ್ ಠಾಣಾ ವ್ಯಾಪ್ತಿಯ ಓರ್ವ ಮಹಿಳೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈತನ ಕುರಿತು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಕಾಸರಗೋಡಿನ ಮಹಿಳೆಯ ಮೊದಲ ಪತಿ ಮೃತಪಟ್ಟಿದ್ದರು. ಅನಂತರ ಎರಡನೇ ಮದುವೆಯಾಗಿದ್ದರೂ ಅದು ವಿಚ್ಛೇದನದಲ್ಲಿ ಪರ್ಯವಸಾನವಾಗಿತ್ತು. ಆ ಬಳಿಕ ಮೂರನೇ ಮದುವೆ ಆಗ್ರಹಿಸಿ ಜಾಹೀರಾತು ನೀಡಿದ್ದರು.
ಇದನ್ನು ಗಮನಿಸಿ ಮದುವೆಗೆ ಆಸಕ್ತನಿದ್ದೇನೆಂದು ಸಂಪರ್ಕಿಸಿ ಬಳಿಕ ಸ್ನೇಹಾಚಾರ ಬೆಳೆಸಿ, ಭರವಸೆ ಮೂಡಿಸಿ ಎರ್ನಾಕುಳಂ, ಮೂನ್ನಾರ್, ಕಾಸರಗೋಡು ಸಹಿತ ಸುತ್ತಾಡಿ, ಜತೆಯಾಗಿ ಲಾಡ್ಜ್ ಗಳಲ್ಲಿ ವಾಸಿಸಿ ಲೈಂಗಿಕ ಸಂಬಂಧ ನಡೆಸಿ ತದನಂತರ ವಂಚಿಸಿರುವುದಾಗಿ ಪ್ರಶೋಭ್ ವಿರುದ್ದ ಮಹಿಳೆ ದೂರಿದ್ದಾಳೆ. ಇದರಂತೆ ಪೋಲೀಸ್ ತನಿಖೆ ನಡೆಸಿದಾಗ ಈತ ಕೇರಳ ವ್ಯಾಪಕ ಹಲವು ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ತೃಷೆಗೆ ಬಳಸಿ ವಂಚಿಸಿರುವ ಮಾಹಿತಿ, ದೂರುಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಬಂಧನ ಕಾರ್ಯಾಚರಣೆ ನಡೆದಿದೆ.