ಮಂಜೇಶ್ವರ: ಕಟುಕರು ಹಟ್ಟಿಯಿಂದ ಗರ್ಭಿಣಿ ದನವನ್ನು ರಾತ್ರೋರಾತ್ರಿ ಕದ್ದೋಯ್ದು ಪರಿಸರದಲ್ಲೆ ಮಾಂಸ ಮಾಡಿ ಕಳೆಬರವನ್ನು ಸ್ಥಳದಲ್ಲೇ ಉಪೇಕ್ಷಿಸಿ ಪರಾರಿಯಾದ ಘಟನೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ನಡೆದಿದೆ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮನೆ ಮಂದಿ ಇದೀಗ ದನ ಕದ್ದ ಕಟುಕರಿಗೆ ತಕ್ಕ ಶಾಸ್ತಿಯಾಗಲೆಂದು ಕುಂಬ್ಳೆ ಶ್ರೀ ಗೋಪಾಲಕೃಷ್ಣ ದೇವರಲ್ಲಿ ಪ್ರಾರ್ಥಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಗೊಳಪಟ್ಟ 7 ನೇ ವಾರ್ಡ್ ಹೊಸಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ “ಗಿರೀಶ್ ನಿಲಯ” ನಿವಾಸಿ, ಪ್ರಗತಿಪರ ಕೃಷಿಕರೂ, ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ವಿಶಾಲಾಕ್ಷ ಎಂಬವರ ಮನೆಯ ಹಟ್ಟಿಯಿಂದ ಮೂರು ವರ್ಷದ, ಗಟ್ಟಿ ಮುಟ್ಟಾದ ಆರು ತಿಂಗಳ ಗರ್ಭಿಣಿ ದನವನ್ನು ಕಳ್ಳರು ಕದ್ದೋಯ್ದು ಈ ದುಷ್ಕೃತ್ಯವನ್ನು ಎಸಗಿದ್ದಾರೆ. ಗುರುವಾರ ರಾತ್ರಿ 12 ಗಂಟೆಗೆ ಮನೆಯ ಹಟ್ಟಿಯಲ್ಲಿರುವ 12 ದನ, ಕರುಗಳಿಗೆ ಮೇವು ನೀಡಿ ಮಲಗಿದ ವಿಶಾಲಾಕ್ಷರವರು ನಿನ್ನೆ ಮುಂಜಾನೆ 5 ಗಂಟೆಗೆ ಹಾಲು ಕರೆಯಲೆಂದು ಹಟ್ಟಿಗೆ ತೆರಳಿದ ವೇಳೆ 12 ದನ, ಕರುಗಳ ಪೈಕಿ ಒಂದು ದನ ನಾಪತ್ತೆಯಾಗಿತ್ತು.
\
ಕಟ್ಟಿ ಹಾಕಿದ ಹಗ್ಗ ತುಂಡರಿಸಿದ ಸ್ಥಿತಿಯಲ್ಲಿತ್ತು. ಕಳ್ಳರು ಹಟ್ಟಿಯೊಳಗೆ ನುಗ್ಗಿ ಹಗ್ಗ ತುಂಡರಿಸಿ, ದನ ಕದ್ದೊಯ್ದಿರಬೇಕೆಂದು ಅಂದಾಜಿಸಿ, ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ವಿಶಾಲಾಕ್ಷರವರು ದೂರು ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪರಿಸರದಲ್ಲಿ ಹುಡುಕಾಡಿದರು.
ಅಪರಾಹ್ನ 12 ಗಂಟೆ ವೇಳೆ ಮನೆಯಿಂದ 100 ಮೀಟರ್ ದೂರದಲ್ಲಿರುವ ಖಾಸಗಿ ವ್ಯಕ್ತಿಯ ಸ್ಥಳದ ಕಾಡು ಪೊದೆಗಳ ನಡುವೆ ದನದ ಕಳೆಬರ ಪರಿಸರದ ನಿವಾಸಿ ಬಾಲಕೃಷ್ಣ ಶೆಟ್ಟಿಯವರಿಗೆ ಮೊದಲಿಗೆ ಕಂಡು ಬಂತು. ಕೂಡಲೇ ವಿಶಾಲಾಕ್ಷರವರಿಗೆ ಬಳಿಕ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ವಿಶಾಲಾಕ್ಷರವರು ಇದು ತಮ್ಮದೇ ದನವೆಂದು ಖಾತರಿಪಡಿಸಿದರು.
ಕಟುಕರು ಹಟ್ಟಿಯಿಂದ ಕದ್ದೊಯ್ದ ದನವನ್ನು ಕಾಡು ಪೊದೆಗಳಲ್ಲಿ ಕೊಂದು. ಮಾಂಸ ಮಾಡಿ, ಬಳಿಕ ಕಳೆಬರವನ್ನು ಅದೇ ಸ್ಥಳದಲ್ಲಿ ಉಪೇಕ್ಷಿಸಿ, ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ಕುಂಬಳೆ ಶ್ರೀ ಗೋಪಾಲ ಕೃಷ್ಣದೇವರ ಮೊರೆ ಹೋಗಿದ್ದಾರೆ. ಇವರ ಮನೆಯ ಹಟ್ಟಿಯಲ್ಲಿರುವ ದನಗಳು ಕರು ಹಾಕಿದ ಕೂಡಲೇ, ದನದ ಹಾಲನ್ನು ಕುಂಬಳೆ ಶ್ರೀ ಗೋಪಾಲಕೃಷ್ಣ ದೇವರಿಗೆ ಸಮರ್ಪಸುತ್ತಿದ್ದರು. ಇದು ವಾಡಿಕೆಯಾಗಿತ್ತು. ಇದೀಗ ಕಟುಕರು ಕೊಂದ ದನ ಕೂಡ ಎರಡು ಬಾರಿ ಕರು ಹಾಕಿದ್ದಾಗ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವರಿಗೆ ಸೇವೆ ಸಲ್ಲಿಸಿದ್ದರು.
ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ದನವನ್ನ ಬಲಿ ತೆಗೆದು, ಕೃತ್ಯ ಎಸಗಿದ ತಪ್ಪಿತ್ತಸ್ಥ ಆರೋಪಿಗಳಿಗೆ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವರೇ ತಕ್ಕ ಉತ್ತರ ನೀಡಬೇಕೆಂದು ಅಗ್ರಹಿಸಿ, ವಿಶಾಲಾಕ್ಷರವರು ತನ್ನ ಪುತ್ರ ಸುಹಾನ್ ನೊಂದಿಗೆ ಇಂದು ಬೆಳಗ್ಗೆ ಕ್ಷೇತ್ರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಕ್ಷೇತ್ರದ ಅರ್ಚಕರಾದ: ಜಯರಾಮ ಅಡಿಗ ಕುಂಬಳೆ, ಕ್ಷೇತ್ರದ ಹೆಡ್ ಕ್ಲರ್ಕ್ ವೆಂಕಟಕೃಷ್ಣ ಭಟ್, ಕ್ಷೇತ್ರದ ಸಮಿತಿ ಉಪಾಧ್ಯಕ್ಷರಾದ: ಸುಧಾಕರ ಕಾಮತ್ ಕುಂಬಳೆ, ಸಂತ್ರಸ್ತರಾದ ವಿಶಾಲಾಕ್ಷ, ಪುತ್ರ ಸುಹಾನ್ ಉಪಸ್ಥಿತರಿದ್ದರು.