ಮಂಜೇಶ್ವರ : ಕನ್ನಡ ಭಾಷೆ ಬಳಕೆಯಾಗುತ್ತಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಕೊಡಲಿ ಏಟು ಬಿದ್ದಿದೆ. ಒಂದಲ್ಲ ಒಂದು ವಿಷಯದಲ್ಲಿ ಕನ್ನಡದ ಅವಗಣನೆಯಾಗುತ್ತಿರುವ ಕಾಸರಗೋಡಿನ ಶಾಲೆಗಳಲ್ಲೂ ಮಲಯಾಳೀಕರಣ ಮಾಡಲು ಮುಂದಾದಾಗ ಕನ್ನಡಿಗರ ಒಕ್ಕೊರಳಿನ ಪ್ರತಿಭಟನೆಯಿಂದ ಅದು ಸಾಕಾರಗೊಂಡಿರಲಿಲ್ಲ. ಇದೀಗ ಕಾಸರಗೋಡು ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ನಾಮಫಲಕಗಳಲ್ಲಿ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ರಾರಾಜಿಸುತಿದ್ದರೂ ಕನ್ನಡ ಭಾಷೆಯನ್ನು ಇಲ್ಲೂ ಅವಗಣಿಸಲಾಗಿದೆ . ಇದು ಕನ್ನಡ ಭಾಷಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರೀಯ ಭಾಷಾ ಅಲ್ಪಸಂಖ್ಯಾತ ನೀತಿಗೆ ಅನುಗುಣವಾಗಿ ಗಡಿನಾಡಿನಲ್ಲಿ ನಾಮಫಲಕದಲ್ಲಿ ಕನ್ನಡ ಭಾಷೆಗೆ ಸ್ಥಾನ ನೀಡುವಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪತ್ರ ಬರೆದು ಸೂಚಿಸಿದೆ.
ಕಾಸರಗೋಡು ಜಿಲ್ಲೆಯ ಮೂಲಕ ಹಾದು ಹೋಗುವ ತಲಪಾಡಿ-ತಿರುವನಂತಪುರಂ ಷಟ್ಟಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ. 90ರಷ್ಟು ಮುಕ್ತಾಯಗೊಂಡು ವಾಹನ ಸಂಚಾದಕ್ಕೆ ತೆರೆದುಕೊಂಡಿದೆ. ಅಂತಿಮ ಹಂತದ ಹೆದ್ದಾರಿ ಕಾಮಗಾರಿಯಲ್ಲಿ ಇಕ್ಕೆಲಗಳಲ್ಲಿ ಬೀದಿದೀಪ, ಸಿಗ್ನಲ್, ಸೈನ್ ಬೋರ್ಡ್ಗಳ ಅಳವಡಿಕೆ ನಡೆಯುತ್ತಿದೆ. ಸೈನ್ ಬೋರ್ಡ್ಗಳಲ್ಲಿ ಮೂರು ಭಾಷೆಗಳಲ್ಲಿ ಸ್ಥಳನಾಮ ಬರೆಯಲಾಗಿದೆ. ಆದರೆ ಕನ್ನಡ ಭಾಷೆಗೆ ಕೊಕ್ ನೀಡಲಾಗಿದೆ. ಡಿಸೆಂಬರ್ ಗೆ ತಲಪಾಡಿ-ಚೆರ್ಕಳ ಮೊದಲ ನಾಮಫಲಕಗಳಲ್ಲಿ ಕೇವಲ ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ.
ಈಗ ನಾಮಫಲಕದಲ್ಲಿ ಕನ್ನಡ ಮರೆಯಾಗಿರುವ ಬಗ್ಗೆ ಪ್ರಾಧಿಕಾರ ಸಂಬಂಧಪಟ್ಟವರ ಗಮನಕ್ಕೆ ತರುವುದರ ಜೊತೆಯಾಗಿ ಪತ್ರದ ಪ್ರತಿಯನ್ನು ಭಾರತೀ ಭಾಷಾ ಅಲ್ಪಸಂಖ್ಯಾತ ಸಚಿವಾಲಯಕ್ಕೂ ರವಾನಿಸಿದೆ.