ಐನೂರು ವರ್ಷಗಳ ಇತಿಹಾಸ ಸಾರುವ ಪಾವೂರು ಪೊಯ್ಯ “ಕಟ್ಟೆಜಾತ್ರೆ” (ದೊಂಪದ ಜಾತ್ರೆ) ನಡೆಯುವ ಬೃಹತ್ ‘ಮಾವಿನ ಮರ’ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಧಾರಾಶಾಯಿ,
ಮಂಜೇಶ್ವರ: “ಕಟ್ಟೆ ಜಾತ್ರೆ” (ದೊಂಪದ ಜಾತ್ರೆ) ನಡೆಯುವ ಇತಿಹಾಸ ಸಾರುವ ಕಟ್ಟೆಯ ಬೃಹತ್ ಮಾವಿನ ಮರವೊಂದು ಇಂದು ಅಪರಾಹ್ನ 3 ಗಂಟೆಗೆ ಬೀಸಿದ ಭಾರಿ ಗಾಳಿಗೆ ಧಾರಾಶಾಯಿಯಾದ ಘಟನೆ ಮಂಜೇಶ್ವರ ಪಾವೂರಿನಲ್ಲಿ ನಡೆದಿದೆ. ಇಲ್ಲಿನ ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ ಆದಿಸ್ಥಳದ ಕಟ್ಟೆಯಲ್ಲಿರುವ ಬೃಹತ್ ಮಾವಿನ ಮರವೊಂದು ಮಧ್ಯಭಾಗದಿಂದಲೇ ಮುರಿತಗೊಂಡು ಧರೆಗುರುಳಿದೆ.
ಈ ಮರಕ್ಕೆ 500 ವರ್ಷಗಳ ಹಿಂದೆ ಸುತ್ತು ಕಟ್ಟೆಕಟ್ಟಿ ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ “ದೊಂಪದ ನೇಮ” ಪ್ರತೀ ವರ್ಷ (ಬೇಸ ಐದು) ಮೇ ತಿಂಗಳ 19 ರಂದು ನಡೆಯುತ್ತಿರುವುದು ವಾಡಿಕೆಯಾಗಿತ್ತು. ಈ ಬಾರಿ ಕೂಡಾ ಮೊನ್ನೆ ಮೇ 19 ರಂದು ನೇಮ ಜರಗಿತ್ತು.
ಈ ಕಟ್ಟೆಯ ಪರಿಸರದಲ್ಲಿ ಹಲವು ಮನೆಗಳಿವೆ, ಅಲ್ಲದೇ ಪರಿಸರದ ನಿವಾಸಿ ಹಜೀಜ್ ಮಾಸ್ತರ್ ರ ತೆಂಗು, ಕಂಗುಗಳಿಂದ ಕೂಡಿದ ತೋಟಗಳಿದ್ದರೂ, ಮರ ಮುರಿದು ಬೀಳುವ ವೇಳೆ ಯಾವುದರ ಮೇಲೆ ಬೀಳದೆ, ಯಾವುದಕ್ಕೂ ಹಾನಿಯಾಗದಂತೆ ಪಕ್ಕದಲ್ಲಿದ್ದ ಕಾಲಿ ಜಾಗೆಗೆ ನೇರವಾಗಿ ಬಂದು ಬಿದ್ದದ್ದು, ಭಕ್ತರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಘಟನೆಯಿಂದ ಸುತ್ತು ಕಟ್ಟೆಯ ಒಂದು ಭಾಗಕ್ಕೆ ಅಲ್ಪ ಹಾನಿಯುಂಟಾಗಿದೆ.
ಇದೀಗ ಮುರಿದು ಬಿದ್ದಿರುವ ಮರವನ್ನು ತೆರವುಗೊಳಿಸುವ ಬಗ್ಗೆ ಬಜಾಲ್ ಪಾವೂರಿನ ಪೊಯ್ಯ ಶ್ರೀ ಚಾಮುಂಡಿ ಬಂಟ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಹಿರಿಯರು ಹಾಗೂ ಊರ ಗ್ರಾಮಸ್ಥರ ಸಮ್ಮುಖದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ದೈವ ಕ್ಷೇತ್ರದ ಆಡಳಿತ ಸಮಿತಿ ಇದೀಗ ನಿರ್ಣಯ ಕೈಗೊಂಡಿದ್ದಾರೆ.