ಮಂಗಲ್ಪಾಡಿಯಲ್ಲಿ ಮೇಲೈಸಿದ ಬಂಟರ ಆಟಿದ ಕೂಟ.

ಉದ್ಯಮಿ,ಕೊಡುಗೈ ದಾನಿ ಕಾಸರಗೋಡು ಜಿಲ್ಲಾ ಬಂಟರ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ, ಕುಳೂರು ಕನ್ಯಾನ ಇವರ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಮಂಗಲ್ಪಾಡಿ ಮನೆಯ ಗದ್ದೆಯಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ ಹಾಗೂ ಆಟಿದ ಕೂಟ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.ಜಿಲ್ಲೆಯ ಬಂಟರ ಸಂಘ, ಫಿರ್ಕಾ ಬಂಟರ ಸಂಘಗಳು, ಪಂಚಾಯತ್ ಮಟ್ಟದ ಎಲ್ಲಾ ಬಂಟರ ಸಂಘದ ಸಹಯೋಗದೊಂದಿಗೆ ಜರಗಿದ ಈ ಕಾರ್ಯಕ್ರಮದಲ್ಲಿ ಆಟಿದ ಕೂಟದ ಸಲುವಾಗಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಹಾಗೂ ಸ್ಪರ್ಧೆಗಳನ್ನು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕುತ್ತಿಕಾರ್‌ ಯಜಮಾನ ಕುಸುಮ ಸುಬ್ಬಣ್ಣ ಶೆಟ್ಟಿ ಮಹಾದ್ವಾರದ ಉದ್ಘಾಟನೆಯನ್ನು ಪ್ರಸಿದ್ಧ ಉದ್ಯಮಿ, ಜಿಲ್ಲಾ ಬಂಟರ ಭವನ ಕಟ್ಟಡ ಸಮಿತಿಯ ಗೌರವ ಅಧ್ಯಕ್ಷ ಕೆ ಕೆ ಶೆಟ್ಟಿ ಕುತ್ತಿಕಾರ್ ಅವರು ಉದ್ಘಾಟಿಸಿದರು. ಆಟಿದ ಕೂಟ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಬಂಟರಭವನದ ಕಟ್ಟಡ ಸಮಿತಿಯ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗೌರವ ಉಪಸ್ಥಿತಿಯಾಗಿ ಬಂಟರ ಸಂಘದ ಅಧ್ಯಕ್ಷ ಅಡ್ವಕೇಟ್ ಸುಬ್ಬಯ ರೈ, ಪ್ರಖ್ಯಾತ ಉದ್ಯಮಿ ಭವಾನಿ ಶಿಪ್ಪಿಂಗ್ ಸರ್ವೀಸಸ್ ಪ್ರೈವೇಟ್ ಲಿ. ಮಾಲಕ ಚೆಲ್ಲಡ್ಕ ಕೆ.ಡಿ ಶೆಟ್ಟಿ ದಡ್ಡಂಗಡಿ, ಮುಂಬೈ ಉದ್ಯಮಿ ಸಂಜೀವ ಶೆಟ್ಟಿ ತಿಂಬರ,ಮುಂಬೈ ಉದ್ಯಮಿ ರವೀಂದ್ರ ಆಳ್ವ ಕಿದೂರುಗುತ್ತು, ಉದ್ಯಮಿ ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಜಿಲ್ಲಾ ಉದ್ಯಮಿ ಸುಧೀರ್‌ಕುಮಾರ್ ಶೆಟ್ಟಿ ಎಣ್ಮ ಕಜೆ, ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ಅಡ್ವಕೇಟ್ ಸದಾನಂದ ರೈ, ಜಿಲ್ಲಾ ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ದಾಮೋದರ ಶೆಟ್ಟಿ, ಮಂಗಲ್ಪಾಡಿ ಮನೆ ಸುಫಲಾಚಂದ್ರ ನಾಯ್ಕ, ಹಿರಿಯ ಕೃಷಿಕರಾದ ಚಂದ್ರಹಾಸ ಶೆಟ್ಟಿ ಕೂಳೂರು ಕನ್ಯಾನ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆಯನ್ನು ನಡೆಸಿದ ಮುಂಬಯಿಯ ಪ್ರಖ್ಯಾತ ಉದ್ಯಮಿ ಭವಾನಿ ಶಿಪ್ಪಿಂಗ್ ಸರ್ವೀಸಸ್ ಪ್ರೈವೇಟ್ ಲಿ. ಮಾಲಕ ಕೆ ಡಿ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿಯವರು ಮಾತನಾಡಿ ಉತ್ತಮ ಸಮಾಜಕ್ಕೆ ಬಂಟ ಬಾಂಧವರ ಕೊಡುಗೆಗಳು ಅಪಾರ. ಒಗ್ಗಟ್ಟಿನಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಒಂದು ಕಾರ್ಯಕ್ರಮ ಸಾಕ್ಷಿ. ನಾವೆಲ್ಲ ಒಂದೇ ಎನ್ನುವ ಭಾವನೆಯಿದ್ದಾಗ ಪರಸ್ಪರ ಉತ್ತಮ ಸಂಬಂಧವನ್ನು ಬೆಸೆಯಲು ಸಾಧ್ಯ. ತುಳುನಾಡಿನ ಆಚಾರ ವಿಚಾರಗಳು,ಆಟ,ತಿನಿಸುಗಳು ಬದುಕಿಗೆ ಪುಸ್ತಕವಿದ್ದಂತೆ ಅದನ್ನು ತೆರೆದು ಓದುವವರಾಗಬೇಕು ಎಂದು ಹೇಳಿದರು.

ಈ ಸಂದರ್ಭ ಮುಂಬೈ ಉದ್ಯಮಿ ಸಂಜೀವ ಶೆಟ್ಟಿ ತಿಂಬರ,ದ.ಕ ಮಾಜಿ ಸಂಸದ ನಲೀನ್ ಕುಮಾರ್ ಕಟೀಲ್ ,ಬ್ರಿಗೆಡರ್ ಐ.ಎನ್.ರೈ, ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಬಂಟರ ಸಂಘದ ಹಿರಿಯ ಸದಸ್ಯರ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಶ್ರೀಧರ್‌ ಶೆಟ್ಟಿ ಮುಟ್ಟ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಶ್ಯಾಮಲ ಶೆಟ್ಟಿ, ಉದ್ಯಮಿ ಪಿ.ಆರ್. ಶೆಟ್ಟಿ ಪೊಯ್ಯಲು ಹಾಗೂ ವಿಶೇಷ ಆಹ್ವಾನಿತರಾಗಿ ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಮೈಸೂರು ಬಂಟರ ಸಂಘದ ಜೊತೆ ಕೋಶಾಧಿಕಾರಿ ಸೌಮ್ಯ ವಿ. ಶೆಟ್ಟಿ, ಚಲನಚಿತ್ರರಂಗದ ರೂಪೇಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಶಿವಾಜಿ ಶೆಟ್ಟಿ, ಮೊದಲಾದವರ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.ಮಂಜೇಶ್ವರದ ಇತಿಹಾಸ ಪ್ರಸಿದ್ಧ ಮಂಗಲ್ಪಾಡಿ ಮನೆಯ ವಿಶಾಲವಾದ ಗದ್ದೆಯ ಕೆಸರಿನಲ್ಲಿ ಸಾವಿರಾರು ಮಂದಿ ಕುಣಿದು ಕುಪ್ಪಲಿಸಿದರು ..

ಸಾಧಕರಿಗೆ ಸನ್ಮಾನ

ಮಂಗಲ್ಪಾಡಿ ಮನೆಯ ವಿಶಾಲ ಗದ್ದೆಯಲ್ಲಿ ಹಾಕಲಾದ ಲೀಲಾವತಿ ಪಕೀರ ಶೆಟ್ಟಿ ವೇದಿಕೆಯಲ್ಲಿ ಕ್ರೀಡೆ,ಕಲೆ, ಸಾಹಿತ್ಯ,ಕೃಷಿ, ವಿದ್ಯಾಭ್ಯಾಸ, ರಕ್ತದಾನ,ನಾಟಿವೈದ್ಯ, ಚಾಲಕ, ಶಿಕ್ಷಕ,ಈಜುಗಾರ,ನಿರೂಪಕ, ಪತ್ರಿಕೋದ್ಯಮ, ನಟ, ನಟಿ,ಹೀಗೆ ನಾನಾ ಮಜಲುಗಳಲ್ಲಿ ಸಾಧನೆ ಮಾಡಿದ 500ಕ್ಕೂ ಅಧಿಕ ಮಂದಿಗಳನ್ನು ಗೌರವದ ಸನ್ಮಾನ ಪತ್ರ, ಪೇಟ,ಸ್ಮರಣಿಕೆ, ಶಾಲಿನೊಂದಿಗೆ ಸನ್ಮಾನಿಸಲಾಯಿತು.

ಮೇಲೈಯಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಕಾಸರಗೋಡು ಜಿಲ್ಲೆಯ ಎಲ್ಲಾ ಪಂಚಾಯತ್ ಬಂಟರ ಸಂಘ ದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಬಂಬ್ರಾಣ ಮತ್ತು ಮಂಗಲ್ಪಾಡಿ ತ್ಯಾಂಪಣ್ಣ ಶೆಟ್ಟಿ ವೇದಿಕೆಯಲ್ಲಿ ಮೂಡಿ ಬಂದವು. ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ತಮ್ಮ ಪ್ರದರ್ಶನವನ್ನು ನೀಡಿದರು.

ರಂಗೇರಿಸಿದ ಯಕ್ಷಗಾನ ನಾಟ್ಯ ವೈಭವ

ಪಟ್ಲ ಫೌಂಡೇಶನ್ ನಿರ್ಮಾತೃ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ, ಹಾಸ್ಯ ವೈಭವ ಸೇರಿದ ಸಾವಿರಾರು ಮಂದಿಯ ಮನಸೂರೆಗೊಂಡಿತು.

ಮೆರುಗು ನೀಡಿದ ಭೋಜನ

ಆಟಿದ ಕೂಟಕ್ಕೆ ಆಗಮಿಸಿದ ಸಾವಿರಾರು ಜನರಿಗೆ ನಿರಂತರ ತಿಂಡಿ ತಿನಿಸುಗಳು ವಿತರಿಸಲ್ಪಟ್ಟವು. ಮಧ್ಯಾಹ್ನ ಬೋಜನಕ್ಕೆ ಆಟಿ ವಿಶೇಷದ ಪದಾರ್ಥಗಳು, ಸಿಹಿತಿಂಡಿ, ಪಾಯಸ ಆಗಮಿಸಿದ ಸಾವಿರಾರು ಜನರ ಉದರ ತನಿಸಿತು.

ಕೆಸರಿನಲ್ಲಿ ಕುಣಿದಾಡಿದ ಬಂಟ ಬಾಂಧವರು

ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಕೆಸರಿಗೆ ಇಳಿದು ಕುಣಿದಾಡಿ ಸಂತಸ ಪಟ್ಟ ಜನರು. ಆಟಿದ ಕೂಟದಲ್ಲಿ ಆಯೋಜಿಸಿದ ನಾನಾ ಬಗೆಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡರು.ಎರಡು ವೇದಿಕೆಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮ ಬಂಟರ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಕಾರ್ಯಕ್ರಮವಾಗಿ ಮೂಡಿಬಂತು.

ಕಾಸರಗೋಡು ಜಿಲ್ಲಾ ಬಂಟರ ಆಟಿದ ಕೂಟ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಬರೆದಿಡುವ ಕಾರ್ಯಕ್ರಮವಾಗಿದ್ದು ತುಳುನಾಡಿನ ಸಂಸ್ಕೃತಿಯನ್ನು ಬೀರುವ ಕಾರ್ಯಕ್ರಮಕ್ಕೆ ಜನಸಾಗರ ಸಾಕ್ಷಿಯಾಯಿತು. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗಿನ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ. ಇನ್ನೂ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲು ಈ ಕಾರ್ಯಕ್ರಮ ನಾಂದಿಯಾಗಿದೆ.

ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ

ಮುಂದಿನ ಯೋಜನೆ

ಕಾಸರಗೋಡು ಜಿಲ್ಲೆಯಲ್ಲಿ ಒಂದು ಬಂಟರ ಭವನ ತಲೆಯೆತ್ತಬೇಕೆನ್ನುವುದು ತುಳುನಾಡಿನ ಬಂಟರ ಸಂಕಲ್ಪ. ಆ ನಿಟ್ಟಿನಲ್ಲಿ ಯೋಜನೆಗಳು ಸಿದ್ದವಾಗಿದ್ದು ಸಮಿತಿ ರೂಪೀಕರಣಗೊಂಡಿದ್ದು ಎಲ್ಲರ ಪ್ರಯತ್ನದಿಂದ ಈ ಒಂದು ಕಾರ್ಯಯೋಜನೆ ಪೂರ್ಣಗೊಳ್ಳಲಿದೆ. ಈ ಒಂದು ಬಂಟರ ಭವನ ನಮ್ಮ ಕಾಸರಗೋಡಿಗೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗುವ ಒಂದು ಭವನವಾಗಿ ಮೂಡಿಬರಲಿದೆ.
ಕಾಸರಗೋಡಿನ ನಾಯ್ಕಾಪಿನಲ್ಲಿ ಡಾ. ಸದಾಶಿವ ಶೆಟ್ಟಿ ಕನ್ಯಾನ ಇವರ ನೇತ್ರತ್ವದಲ್ಲಿ ಕೆ.ಕೆ ಶೆಟ್ಟಿ ಕುತ್ತಿಕ್ಕಾರು, ಕೆ.ಡಿ ಶೆಟ್ಟಿಯವರ ಸಹಭಾಗಿತ್ವದಲ್ಲಿ ಈ ಒಂದು ಕಾರ್ಯಯೋಜನೆ ತಲೆಯೆತ್ತಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!