ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿಯಲ್ಲಿ ನಿರ್ಮಿಸಲಾಗುತ್ತಿರುವ ಟೋಲ್ ಪ್ಲಾಝಾಕ್ಕೆ ದಿನದಿಂದ ದಿನಕ್ಕೆ ಅಧಿಕಾರಸ್ಕರ ನಿಲುವಿನ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಸೋಮವಾರದಂದು ನಾಗರಿಕ ಕ್ರಿಯಾ ಸಮಿತಿ ಹಾಗೂ ವ್ಯಾಪಾರಿ ವ್ಯವಸಾಯಿ ಸಮನ್ವಯ ಸಮಿತಿ ಜಂಟಿಯಾಗಿ ಟೋಲ್ ಗೇಟ್ ನಿರ್ಮಾಣ ಸ್ಥಳಕ್ಕೆ ಪ್ರತಿಭಟನಾ ಮಾರ್ಚ್ ನಡೆಸಿತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆ ಸೃಷ್ಟಿಸಿ, ಅನುಮತಿ ರಹಿತ ಪ್ರತಿಭಟನಾ ಮಾರ್ಚ್ ನಡೆಸಿದ 10ಮಂದಿ ಕ್ರಿಯಾ ಸಮಿತಿ ಕಾರ್ಯಕರ್ತರ ವಿರುದ್ಧ ಕುಂಬಳೆ ಪೋಲೀಸರು ಕೇಸು ದಾಖಲಿಸಿದ್ದಾರೆ.ಕುಂಬಳೆ ಪೇಟೆಯಿಂದ ಆರಿಕ್ಕಾಡಿ ಕಡವತ್ ಗೆ ನಡೆದ ಪ್ರತಿಭಟನಾಮಾರ್ಚ್ ಗೆ ಗ್ರಾ. ಪಂ. ಅಧ್ಯಕ್ಷೆ ಯು. ಪಿ. ತಾಹಿರಾ ಚಾಲನೆ ನೀಡಿದರು.
ರಘುದೇವನ್ ಮಾಸ್ತರ್, ಪುತ್ತಿಗೆ ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳೆ ಗ್ರಾ. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಮೊದಲಾದವರು ಮಾತನಾಡಿ ಕುಂಬಳೆಯ ಟೋಲ್ ಪ್ಲಾಝಾ ಜನವಿರೋಧಿಯಾಗಿದ್ದು, ಅದನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆಗೆ ಬಿಜೆಪಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಪಾಲ್ಗೊಂಡರು. ಕೇವಲ 25ಕಿ.ಮೀ.ಅಂತರದಲ್ಲಿ ಟೋಲ್ ಗೇಟ್ ಇಡೀ ದೇಶದಲ್ಲೇ ಮತ್ತೆಲ್ಲೂ ಇಲ್ಲ. ಆದರೆ ಕುಂಬಳೆಯಲ್ಲಿ ಟೋಲ್ ಗೇಟ್ ಸ್ಥಾಪಿಸುತ್ತಿರುವುದು ಕಾನೂನು ಉಲ್ಲಂಘನೆ ಹಾಗೂ ಜನದ್ರೋಹಕರ ನಿಲುವು ಎಂದು ಪ್ರತಿಭಟನಾಕಾರರು ಪ್ರತಿಕ್ರಿಯಿಸಿದರು.