ಫೆ.7 ಮತ್ತು 8ರಂದು ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳ : ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ

ಮಂಗಳೂರು: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಫೆ.7 ಮತ್ತು 8ರಂದು ನಡೆಯಲಿದ್ದು ಇದರ ಪೂರ್ವಬಾವಿ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದೆ. ಐಕಳ ಕಂಬಳದಲ್ಲಿ ಜೂಜು ನಿಯಂತ್ರಣ ಹಾಗೂ ಸಮಯಪಾಲನೆಗೆ ವಿಶೇಷ ಒತ್ತನ್ನು ನೀಡಲಾಗುವುದು ಎಂದು ಕಂಬಳ ಅಸೋಸಿಯೇಶನ್ ಮತ್ತು ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು.

ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಂಬಳದಲ್ಲಿ ಜೂಜು ಸಕ್ರಿಯವಾಗಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದೆ. ಐಕಳ ಕಂಬಳದಲ್ಲಿ ಅದನ್ನು ಸಂಪೂರ್ಣ ನಿಯಂತ್ರಣ ತರಲಾಗುವುದು. ಅಲ್ಲದೆ ಕಂಬಳದಲ್ಲಿ ಕೋಣ ಬಿಡುವ ವಿಚಾರಕ್ಕೆ ಸಮಯ ನಿಗದಿಮಾಡಲಾಗಿದೆ. ನಿಗದಿತ ಅವಧಿಗೆ ಕೋಣ ಗಂತಿಗೆ ಬಾರದಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಮೂಲಕ ಕಂಬಳದಲ್ಲಿ ಸಮಯಪಾಲನೆಗೆ ಆದ್ಯತೆ ನೀಡಲಾಗುವುದು ಎಂದರು.

ಫೆ.3ರಿಂದ 8ರವರೆಗೆ ನಿರಂತರ ಕಂಬಳೋತ್ಸವ, ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. 6ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನ ನಡೆಯಲಿದೆ. ಫೆ.7ರಂದು ಬೆಳಗ್ಗೆ 8ಕ್ಕೆ ಕರೆಮುಹೂರ್ತ ನಡೆಯಲಿದ್ದು, ಕೋಣಗಳು ಕರೆಗೆ ಇಳಿಯಲಿದೆ. ಬೆಳಗ್ಗೆ 9:30ಕ್ಕೆ ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರಿಗೆ ಕಂಬಳ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕಂಬಳದಲ್ಲಿ ಎಲ್ಲ ಕೋಣಗಳ ಯಜಮಾನರನ್ನು ವಿಶೇಷವಾಗಿ ಗೌರವಿಸಲಾಗುವುದು. ವಿಜೇತ ಕೋಣಗಳಿಗೆ ಚಿನ್ನದೊಂದಿಗೆ ನಗದು ಬಹುಮಾನ ನೀಡಲಾಗುವುದು. ಸೆಮಿಫೈನಲ್‌ಗೆ ಬಂದಿರುವ ಎಲ್ಲ ಕೋಣಗಳಿಗೆ ವಿಶೇಷ ಬಹುಮಾನವಿದೆ. ಕನಹಲಗೆ ವಿಭಾಗದಲ್ಲಿ ಭಾಗವಹಿಸುವ ವಿಜೇತ ಕೋಣಗಳಿಗೆ ಚಿನ್ನದೊಂದಿಗೆ ಎಲ್ಲಾ ಕೋಣದ ಯಜಮಾನರಿಗೂ ವಿಶೇಷ ಬಹುಮಾನ, ನಗದು ಪುರಸ್ಕಾರವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಐಕಳ ಬಾವ ಕಂಬಳದ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಮುಂಬೈ ಸಮಿತಿ ಅಧ್ಯಕ್ಷ ಕುಶಾಲ್ ಭಂಡಾರಿ, ಐಕಳ ಬಾವ ಕಂಬಳದ ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ದೊಡ್ಡಮನೆ, ಕೋಶಾಧಿಕಾರಿ ಪ್ರಕಾಶ್‌ ಶೆಟ್ಟಿ, ತಿಲಕ್‌ರಾಜ್‌ ಬಲ್ಲಾಳ್‌, ಪ್ರದೀಪ್ ಕುಮಾರ್ ಐಕಳಬಾವ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!