ಬಂಟ್ವಾಳ: ತುಳುನಾಡಿನ ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಜಾತ್ರೆಯ ಧ್ವಜಾರೋಹಣ ಹಿನ್ನೆಲೆಯಲ್ಲಿ ನಂದ್ಯದ ಪವಿತ್ರ ಮಣ್ಣಿನಿಂದ ತಾಯಿ ಭಗವತಿಯ ನಂದಾದೀಪ, ಭದ್ರಕಾಳಿಯ ಬಿಂಬ ಹಾಗೂ ಅರಸು ದೈವಗಳ ಆಯುಧಗಳೊಂದಿಗೆ ಫಲ್ಗುಣಿ ನದಿಯನ್ನು ದಾಟಿ ರಾಜಗಾಂಭೀರ್ಯದಲ್ಲಿ ಆಗಮಿಸಿದ ಮನಮೋಹಕ ಕ್ಷಣ ಭಕ್ತರನ್ನು ಆಕರ್ಷಿಸಿತು.
ತುಳುನಾಡಿನಲ್ಲಿ ದೈವದ ಮೂಲಕ ಜಾತ್ರೆಯ ಆರಾಟದ ದಿನಾಂಕವನ್ನು ನಿಗದಿಪಡಿಸುವ ವಿಶಿಷ್ಟ ಸಂಪ್ರದಾಯ ಪೊಳಲಿ ಕ್ಷೇತ್ರದಲ್ಲಿ ಮಾತ್ರ ಕಂಡುಬರುವ ಅಪರೂಪದ ಆಚರಣೆ ಆಗಿದೆ. ಪೊಳಲಿ ಕ್ಷೇತ್ರಕ್ಕೂ ನಂದ್ಯ ಮಣ್ಣಿಗೂ ವಿಶೇಷ ಸಂಬಂಧವಿದೆ ಎಂಬುದು ಭಕ್ತರ ನಂಬಿಕೆ.
ನಂದ್ಯದ ಭದ್ರಕಾಳಿ, ಭಗವತಿ ಹಾಗೂ ಅರಸು ದೈವಗಳು ಪೊಳಲಿಗೆ ಆಗಮಿಸಿದ ಬಳಿಕ, ಅರಸು ದೈವವು ಜಾಗಟೆ ಬಡಿದು ಜಾತ್ರೆ ಎಷ್ಟು ದಿನ ನಡೆಯಲಿದೆ, ಯಾವಾಗ ಆರಾಟ ಮತ್ತು ರಥೋತ್ಸವ ನಡೆಯಲಿದೆ ಎಂಬುದನ್ನು ಸೇರಿದ್ದ ಭಕ್ತರಿಗೆ ಡಂಗುರ ಸಾರುವ ಕ್ರಮ ತುಳುನಾಡಿನಲ್ಲಿ ಅಪರೂಪ ಹಾಗೂ ಅದ್ಭುತವಾದ ಸಂಪ್ರದಾಯವೆಂದು ಪರಿಗಣಿಸಲಾಗಿದೆ.