ಸಜೀಪಮಾಗಣೆ: ಪಡೇರ ಮಾಡ ಕ್ಷೇತ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ದೈವಗಳು ಹಾಗೂ ಶ್ರೀ ನಾಲ್ಕೈಥಾಯ ದೈವದ ನೇಮೋತ್ಸವದ ಅಂಗವಾಗಿ ಸಂಪ್ರದಾಯಬದ್ಧ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಪೂರ್ವಶಿಷ್ಟ ಸಂಪ್ರದಾಯದಂತೆ ಕಾಂತಡಿ ಗುತ್ತುವಿನಿಂದ ಸಂಕೇಶ ಬಂಡಾರದ ಮನೆಗೆ ಆಗಮಿಸಿದ ಶ್ರೀ ದೈವಗಳ ಕಿರುವಾಳು, ಆಭರಣಗಳು, ವಾದ್ಯ-ಬ್ಯಾಂಡು, ಕೊಂಬು ಸೇರಿದಂತೆ ಸಕಲ ಬಿರುದಾವಳಿಗಳೊಂದಿಗೆ ರಜತ ಪಲ್ಲಕ್ಕಿಯಲ್ಲಿ ಸುಮಾರು ಆರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆ ಕಲ್ಲಾಡಿಗೋಳಿ, ದೇರಾಜೆ ಹಾಗೂ ಸಜೀಪ ಪೇಟೆಯ ಮೂಲಕ ಸಾಗುತ್ತಾ ರಾಮ, ಲಕ್ಷ್ಮಣ, ಮಾಡದಾರು ಎಂಬ ಐದು ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಪಡೇರ ಮಾಡ ಕ್ಷೇತ್ರ ತಲುಪಿತು. ಬಳಿಕ ದ್ವಜಾರೋಹಣ ನೆರವೇರಿಸಿ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಉಗ್ಗ ಶೆಟ್ಟಿ (ಗಣೇಶ್ ನಾಯಕ್), ಬಿಜಂದಾರು ಗುತ್ತಿನ ಶಿವರಾಮ ಭಂಡಾರಿ, ಸಜೀಪ ಗುತ್ತಿನ ಮುತ್ತಣ್ಣ ಶೆಟ್ಟಿ (ಕಾಳ ಶೆಟ್ಟಿ), ಮಾಡದಾರು ಗುತ್ತಿನ ಶಶಿಧರ ರೈ (ನಾರಣ ಆಳ್ವ), ನಗ್ರಿ ಗುತ್ತಿನ ವಿವೇಕ್ ಶೆಟ್ಟಿ, ಹಾಗೂ ದೇವಿ ಪ್ರಸಾದ್ ಪೂಂಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಡುರಾತ್ರಿ ವೇಳೆ ಮುಸ್ಲಿಂ ಸಮುದಾಯದವರು ಸೇರಿ ಸಾವಿರಾರು ಭಕ್ತರು ಕಟ್ಟೆ ಪೂಜೆ ಹಾಗೂ ಭೇಟಿಯಲ್ಲಿ ಪಾಲ್ಗೊಂಡು ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಿದರು.