ಕಾಸರಗೋಡಿನಲ್ಲಿ ಯುಡಿಎಫ್ ಅಲೆ: ಮಂಜೇಶ್ವರ–ಕಾಸರಗೋಡಿನಲ್ಲಿ ಭರ್ಜರಿ ಗೆಲುವು, ಎಲ್‌ಡಿಎಫ್ ಕುಸಿತ

​ಮಂಜೇಶ್ವರ/ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಿರೀಕ್ಷಿತ ಆಡಳಿತ ವಿರೋಧಿ ಅಲೆ ಅಪ್ಪಳಿಸಿದ್ದು, ಆಡಳಿತಾರೂಢ ಎಲ್‌ಡಿಎಫ್ ಹೀನಾಯ ಸೋಲು ಕಂಡಿದೆ. ಕಾಸರಗೋಡು ಜಿಲ್ಲೆಯಲ್ಲೂ ಈ ಅಲೆ ಸ್ಪಷ್ಟವಾಗಿ ಪ್ರತಿಫಲಿಸಿದ್ದು, ಎಡರಂಗದ ಭದ್ರಕೋಟೆಗಳಾದ ತ್ರಿಕರಿಪುರ ಮತ್ತು ಉದುಮಾದಲ್ಲೂ ಯುಡಿಎಫ್ ಬಿರುಕು ಮೂಡಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದೆ.

​ದೇಶವೇ ಕುತೂಹಲದಿಂದ ಗಮನಿಸುತ್ತಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕಣವಾಗಿದ್ದ ಇಲ್ಲಿ, ಯುಡಿಎಫ್ ಅಭ್ಯರ್ಥಿ 26,093 ಮತಗಳ ಬೃಹತ್ ಅಂತರದೊಂದಿಗೆ ಮುನ್ನಡೆ ಸಾಧಿಸಿ ಇತಿಹಾಸ ಬರೆದಿದ್ದಾರೆ. ಇದು ಈ ಕ್ಷೇತ್ರದ ಮಟ್ಟಿಗೆ ದಾಖಲೆಯ ಗೆಲುವಿನ ಅಂತರವಾಗಿದೆ. ಮಧ್ಯಾಹ್ನ 2:10ರ ವೇಳೆಗೆ ಇನ್ನೂ ಐದು ಸುತ್ತಿನ ಎಣಿಕೆ ಬಾಕಿ ಇರುವಾಗಲೇ ಯುಡಿಎಫ್ ಕ್ಯಾಂಪ್‌ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.


ಕಾಸರಗೋಡು ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಅವರು 23,240 ಮತಗಳ ಭರ್ಜರಿ ಅಂತರದಿಂದ ಗೆಲುವು ಖಚಿತಪಡಿಸಿಕೊಂಡಿದ್ದಾರೆ.
​ಉದುಮದಲ್ಲಿ ಯುಡಿಎಫ್‌ನ ಕೆ. ನೀಲಕಂಠನ್ ಅವರು ಹಾಲಿ ಶಾಸಕ ಎಲ್‌ಡಿಎಫ್‌ನ ಸಿ.ಎಚ್. ಕುಂಞಂಬು ಅವರಿಗೆ ಶಾಕ್ ನೀಡಿದ್ದಾರೆ. ಸುಮಾರು 7,682 ಮತಗಳ ಅಂತರದಿಂದ ನೀಲಕಂಠನ್ ಮುನ್ನಡೆಯಲ್ಲಿದ್ದಾರೆ.
​ಕಾಞಂಗಾಡ್: ಇಲ್ಲಿ ಮಾತ್ರ ಎಡರಂಗ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ಎಲ್‌ಡಿಎಫ್ ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ 15,316 ಮತಗಳ ಮುನ್ನಡೆಯಲ್ಲಿದ್ದಾರೆ.

​ತ್ರಿಕರಿಪುರ ದಲ್ಲಿಎಡರಂಗದ ವಿ.ಪಿ.ಪಿ ಮುಸ್ತಫಾ ಅವರು ಕೇವಲ 3,798 ಮತಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದು, ತೀವ್ರ ಪೈಪೋಟಿ ಎದುರಾಗಿದೆ.

​ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದ್ದರೂ, ಮಂಜೇಶ್ವರ ಮತ್ತು ಕಾಸರಗೋಡಿನ ಬೀದಿ-ಬೀದಿಗಳಲ್ಲಿ ಯುಡಿಎಫ್ ಕಾರ್ಯಕರ್ತರು ಈಗಾಗಲೇ ವಿಜಯೋತ್ಸವ ಆರಂಭಿಸಿದ್ದಾರೆ. ಕಾಸರಗೋಡಿನ ಎಣಿಕೆ ಪೂರ್ಣಗೊಂಡಿದ್ದು, ಮಂಜೇಶ್ವರದಲ್ಲಿ ಅಂತಿಮ ಹಂತದ ಎಣಿಕೆ ಪ್ರಗತಿಯಲ್ಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!