ಮಂಗಳೂರು: ಮರಕಡ ಜಂಕ್ಷನ್ನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆ ಹಾಗೂ ಮಗು ಕೆಳಗೆ ಬಿದ್ದ ಘಟನೆ ನಡೆದಿದ್ದು, ಇದೇ ವೇಳೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ 13B ‘ಮಾಸ್ಟರ್’ ಬಸ್ಸಿನ ಚಾಲಕ ದಯಾನಂದ ಮತ್ತು ನಿರ್ವಾಹಕ ಸಂದೀಪ್ ಮಾನವೀಯತೆ ಮೆರೆದಿದ್ದಾರೆ.
ಘಟನೆಯನ್ನು ಗಮನಿಸಿದ ಇಬ್ಬರೂ ತಕ್ಷಣವೇ ರಕ್ಷಣೆಗೆ ಧಾವಿಸಿ, ತಮ್ಮ ಬಸ್ನ ನಿಯಮಿತ ಟ್ರಿಪ್ ಬಗ್ಗೆ ಚಿಂತಿಸದೆ ಗಾಯಾಳುಗಳ ನೆರವಿಗೆ ಮುಂದಾದರು. ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕಳುಹಿಸಿ, ಗಾಯಗೊಂಡ ಮಹಿಳೆ ಹಾಗೂ ಮಗುವನ್ನು ತುರ್ತಾಗಿ ಎ.ಜೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದರು.
ಬಸ್ ಸಿಬ್ಬಂದಿಯ ಈ ಸಮಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅಪಾಯದ ಸಂದರ್ಭದಲ್ಲಿ ತೋರಿದ ಅವರ ಸೇವಾಭಾವಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.