ದಕ್ಷಿಣ ಕನ್ನಡ :ಕಡಬದ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ರಸ್ತೆಯಲ್ಲಿ ದಿನಾಂಕ:13 ರಂದು ಬೆಳಗ್ಗಿನ ಜಾವ ಪಿಕಪ್ ವಾಹನವೊಂದು ಆಯತಪ್ಪಿ ಬಿದ್ದಿದ್ದು, ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಇದರಲ್ಲಿ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪ-ನಿರೀಕ್ಷಕರಿಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ, ಪಿಕಪ್ ವಾಹನದ ಚಾಲಕ ಹಾಸನ ಅರಕಲಗೂಡು ನಿವಾಸಿಗಳಾದ ಚಂದ್ರು @ ಚಂದ್ರಶೇಖರ ಮತ್ತು ಕ್ಲೀನರ್ ಮೋಹನ ಎಂಬವರುಗಳನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು.
ವಿಚಾರಣೆಗೊಳಪಡಿಸಿದಾಗ ಈ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಚಾಲಕ ಹಾಗೂ ಕ್ಲೀನರ್ ಒಪ್ಪಿಕೊಂಡಿದ್ದರು.
ಆರೋಪಿಗಳು ಯಾವುದೇ ಪರವಾನಗಿ ಇಲ್ಲದೇ ಎರಡು ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದು, ವಾಹನ ಆಯತಪ್ಪಿ ಬಿದ್ದಾಗ ಜಾನುವಾರುಗಳನ್ನು ವಾಹನದಿಂದ ಇಳಿಸಿ ಓಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.
ಘಟನಾ ಸ್ಥಳದ ಸ್ವಲ್ಪ ದೂರದಲ್ಲಿ ಹಗ್ಗ ಬಿಚ್ಚಿ ಓಡಿಸಿದ ಎರಡು ಜಾನುವಾರುಗಳನ್ನು ಪೊಲೀಸರು ಪತ್ತೆಮಾಡಿ, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ಧ ಕರ್ನಾಟಕ ಗೋವುಗಳ ಸಂರಕ್ಷಣಾ & ಜಾನುವಾರು ಪ್ರತಿಬಂಧಕ ಕಾಯ್ದೆ ಮತ್ತು ಪ್ರಾಣಿ ಸಂರಕ್ಷಣಾ ಕಾಯ್ದೆ, ಭಾರತೀಯ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದರು.