ಬಂಟ್ವಾಳ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ನಿವಾಸಿ ರಾಜೇಂದ್ರ ಕೆ.ವಿ.(64) ಅವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಜೂ.23ರಂದು ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ. ರಾಜೇಂದ್ರ ಅವರು ಮಂಗಳೂರು ಪಣಂಬೂರು ನವಬಂದರು ಮಝ್ಗಾಂವ್ ಡಾಕ್ ಲಿಮಿಟೆಡ್ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿದ್ದು, ಬಳಿಕ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಕಲೆ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸ್ಥಾಪಕರಲ್ಲಿ ಓರ್ವರಾಗಿದ್ದು, ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಉತ್ತಮ ಕಲಾವಿದರಾಗಿದ್ದ ಅವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು.
ಸಂಘಟಕರಾಗಿದ್ದ ಅವರು ಮಿತ್ರ ಮಂಡಳಿ ಮೂಲಕ ಯುವಜನ ಮೇಳ, ಆರೋಗ್ಯ ಶಿಬಿರ, ಆಟಿದ ಕೂಟ, ನಾಟಕ ಸ್ಪರ್ಧೆ, ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರಗಳನ್ನು ಸಂಘಟಿಸಿದ್ದರು. ವಾಲಿಬಾಲ್ ಆಟಗಾರರಾಗಿದ್ದರು.ಅವರ ನಿಧನಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ, ಬುಡಾ ಅಧ್ಯಕ್ಷ ಬೇಬಿ ಕುಂದರ್ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ