ಮಂಜೇಶ್ವರ: ”ಬ್ಯಾಲೆಟ್ ಪೇಪರ್ ಗುಂಡಿಗಿಂತಲೂ ಬಲಿಷ್ಠ; ಮತದಾನವೇ ರಾಜಕೀಯ ಚಟುವಟಿಕೆಯ ಅಡಿಪಾಯ” ಎಂಬ ಮಹಾನ್ ಧ್ಯೇಯವಾಕ್ಯವನ್ನು ಸಾಬೀತುಪಡಿಸುವಂತೆ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಗಡಿಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಸತ್ ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ಏಕ ಕಾಲದಲ್ಲಿ ನಡೆಯಿತು.
ಶಾಲಾ ಪ್ರಾಂಶುಪಾಲರಾದ ಶ್ರೀಯುತ ಅಬ್ದುಲ್ ಖಾದರ್ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಂದ ನಾಮ ಪತ್ರಗಳನ್ನು ಸ್ಪೀಕರಿಸಿ ಪರಿಶೀಲಿಸಿದರು. ಅದೇ ರೀತಿ ವಿದ್ಯಾರ್ಥಿಗಳು ಪ್ರತಿಯೊಂದು ತರಗತಿಗಳಿಗೆ ತೆರಳಿ ಮತ ಯಾಚಿಸುವ ದೃಶ್ಯ ಕೂಡಾ ಕಂಡು ಬಂತು.
ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ, ಮತಗಟ್ಟೆ ನಿರ್ವಹಣೆ, ಮತದಾನದ ಗೌಪ್ಯತೆ ಮತ್ತು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ವೃತ್ತಿಪರ ಶೈಲಿಯಲ್ಲಿ ನಡೆಸಲಾಯಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಾಲ್ಯದಿಂದಲೇ ಅಳವಡಿಸುವ ಉದ್ದೇಶದಿಂದ ಈ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯು ಕೇವಲ ಪಠ್ಯಕ್ಕೆ ಸೀಮಿತವಾಗದೆ, ನೈಜ ಚುನಾವಣಾ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿತು. ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ಮತ್ತು ಮತ ಎಣಿಕೆಯ ಹಂತಗಳು ಅತ್ಯಂತ ಶಿಸ್ತುಬದ್ಧವಾಗಿ ನಡೆದವು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿಭಿನ್ನ ಹಾಗೂ ನವೀನ ಚಟುವಟಿಕೆಗಳ ಮೂಲಕ ಕ್ರಾಂತಿಯನ್ನೇ ಸೃಷ್ಟಿಸುತ್ತಿರುವ ಪೀಸ್ ಕ್ರಿಯೇಟಿವ್ ಶಾಲೆ, ಈ ಮೂಲಕ ವಿದ್ಯಾರ್ಥಿಗಳಲ್ಲಿ ನಾಗರಿಕ ಜವಾಬ್ದಾರಿ ಹಾಗೂ ಸಮಾಜಮುಖಿ ಚಿಂತನೆಯನ್ನು ಬಿತ್ತಿತು.
ತಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಈ ಚುನಾವಣೆ ವಿದ್ಯಾರ್ಥಿಗಳಿಗೆ ಕೇವಲ ಮತ ಚಲಾಯಿಸುವ ಅನುಭವ ಮಾತ್ರವಲ್ಲದೆ, ನಾಯಕತ್ವದ ಜವಾಬ್ದಾರಿಯನ್ನೂ ಮನದಟ್ಟು ಮಾಡಿಕೊಟ್ಟಿತು.
ಶಾಲಾ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಮೊಹಮ್ಮದ್ ಫಾಸಿಲ್ ಚುನಾಯಿತಗೊಂಡರು. ಅದೇ ರೀತಿ ವಿದ್ಯಾರ್ಥಿ ನಾಯಕಿಯಾಗಿ 10 ನೇ ತರಗತಿಯ ಖದೀಜ ಅಮ್ನಾ ಆಯ್ಕೆಯಾದರು. ಕ್ರೀಡಾ ನಾಯಕನಾಗಿ ಅಬ್ಬಾಸ್ ವಾಸ್ಫಿ ಹಾಗೂ ನಾಯಕಿಯಾಗಿ ಸಫಾ ನಫೀಸ ಆಯ್ಕೆಯಾದರು ಅದೇ ರೀತಿ ಶಿಸ್ತಿನ ನಾಯಕನಾಗಿ ಮೂಸ ಫಾರಿಕ್ ಹಾಗೂ ನಾಯಕಿಯಾಗಿ ಆಸ್ಯ ಮಿನ್ಹಾ ಆಯ್ಕೆಗೊಂಡರು.
ಈ ಬಗ್ಗೆ ವಿದ್ಯಾರ್ಥಿನಿ ಖದೀಜಾ ಅಮ್ನಾ ಮಾತನಾಡಿ ( Byt 1) : ನಮ್ಮ ಶಾಲೆಯ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ್ದು ಅತ್ಯಂತ ರೋಮಾಂಚನಕಾರಿ ಅನುಭವವಾಗಿತ್ತು. ಈ ಪ್ರಕ್ರಿಯೆಯ ಬಗ್ಗೆ ಇದ್ದ ಕುತೂಹಲ ದೂರವಾಯಿತು. ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಲ್ಲದೆ, ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಪ್ರಕ್ರಿಯೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೊಂದು ಜವಾಬ್ದಾರಿಯುತ ಮತ್ತು ಮಹತ್ವದ ಅನುಭವವಾಗಿತ್ತು. ಎಂದು ಹೇಳಿದರು.
ಅದೇ ರೀತಿ ವಿದ್ಯಾರ್ಥಿನಿ ಶಿಝ ಝಹರಾ ಮಾತನಾಡಿ (byt 2 ) : ವಿದ್ಯಾರ್ಥಿ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿದ್ದು ನಮಗೆ ಬಹಳ ಮೌಲ್ಯಯುತ ಮತ್ತು ಸ್ಮರಣೀಯ ಅನುಭವವಾಯಿತು. ಇದು ಚುನಾವಣಾ ಪ್ರಕ್ರಿಯೆಯ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡಿತು. ಶಿಸ್ತುಬದ್ಧವಾಗಿ ಮತದಾನ ನಡೆಸಿಕೊಟ್ಟ ನಮ್ಮ ಶಿಕ್ಷಕರಿಗೆ ಧನ್ಯವಾದಗಳು. ನಮ್ಮ ಮತ ಚಲಾಯಿಸಿ ಶಾಲೆಯ ನಾಯಕತ್ವ ಆಯ್ಕೆಯಲ್ಲಿ ಪಾಲ್ಗೊಂಡಿದ್ದು ನಮಗೆ ಹೆಮ್ಮೆಯ ಕ್ಷಣವಾಗಿತ್ತು. ಎಂದು ಹೇಳಿದರು.
ಪೀಸ್ ಕ್ರಿಯೇಟಿವ್ ಶಾಲೆಯ ಈ ಪ್ರಯತ್ನವು ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿತ್ತುವುದಲ್ಲದೆ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಸುಸ್ಥಿರ ಭಾರತದ ನಿರ್ಮಾತೃಗಳು ಎಂಬುದನ್ನು ಸಾಬೀತುಪಡಿಸಿತು. ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ತೋರಿದ ಈ ಗಂಭೀರ ಆಸಕ್ತಿ ಮತ್ತು ಜವಾಬ್ದಾರಿಯುತ ನಡವಳಿಕೆ ಸ್ಥಳೀಯವಾಗಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಹೆಡ್ ಕೋರ್ಡಿನೇಟರ್ ಝಕಿಯಾ ಬಾನು, ಕೋರ್ಡಿನೇಟರುಗಳಾದ ಆಯಿಷಾ ಸಫ್ರೀನಾ, ಅನೂಧ್ ಆಯಿಷಾ, ಖೈರುನ್ನಿಸಾ, ಧನ್ಯಶ್ರೀ ಹಾಗೂ ಬಿಂದು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.