ಮಂಗಳೂರು: ನಗರದ ಪಿವಿಎಸ್ ಕಲಾಕುಂಜ್ನಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ದಿವ್ಯ ದರ್ಶನ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಈ ಸಂದರ್ಭದಲ್ಲಿ ಅಲಂಕೃತಗೊಂಡಿದ್ದ ಶ್ರೀ ಶ್ರೀ ಕೃಷ್ಣ ಬಲರಾಮ, ಶ್ರೀ ಶ್ರೀ ಗೌರ ನಿತಾಯಿ ಹಾಗೂ ಜಗದ್ಗುರು ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ದಿವ್ಯ ದರ್ಶನವನ್ನು ಸಾವಿರಾರು ಭಕ್ತರು ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗಿನಿಂದಲೇ ಭಕ್ತರು ಮಂದಿರಕ್ಕೆ ಆಗಮಿಸಿ ದೇವರ ದರ್ಶನ ಪಡೆದು, ಹರಿನಾಮ ಸಂಕೀರ್ತನೆ, ಮಂಗಳಾರತಿ ಹಾಗೂ ವಿಶೇಷ ಪೂಜಾ ಸೇವೆಗಳಲ್ಲಿ ಪಾಲ್ಗೊಂಡರು. ದೇವರ ಸನ್ನಿಧಿಯಲ್ಲಿ ಭಕ್ತರು ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಮಂದಿರವನ್ನು ವಿವಿಧ ಬಗೆಯ ಪುಷ್ಪಾಲಂಕಾರಗಳಿಂದ ಅಲಂಕರಿಸಲಾಗಿದ್ದು, ಆಧ್ಯಾತ್ಮಿಕ ವಾತಾವರಣ ಭಕ್ತರನ್ನು ಆಕರ್ಷಿಸಿತು. ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ಬಲರಾಮ, ಶ್ರೀ ಶ್ರೀ ಗೌರ ನಿತಾಯಿ ಹಾಗೂ ಶ್ರೀಲ ಪ್ರಭುಪಾದರ ದಿವ್ಯ ಕೃಪೆಗೆ ಪಾತ್ರರಾದರು. ಮಂದಿರದಲ್ಲಿ ದಿನವಿಡೀ ಭಜನೆ, ಕೀರ್ತನೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನಡೆಯಿತು.