ವಯನಾಡು: ಕೇರಳದ ವಯನಾಡಿನಲ್ಲಿ ಭೂಕುಸಿತ (Wayanad Landslide) ಸಂತ್ರಸ್ತ ಪ್ರದೇಶದಲ್ಲಿ ಅವಳಿ ಸುರಂಗ (Twin Tunnel) ನಿರ್ಮಿಸುತ್ತಿರುವ ದಿಲೀಪ್ ಬಿಲ್ಡ್ ಕಾನ್ಗೆ (Dilip Buildcon Limited) ಕರ್ನಾಟಕದ ನಂಟಿದೆ. ಜೊತೆಗೆ ಕರ್ನಾಟಕದಲ್ಲಿ ಈ ಸಂಸ್ಥೆ ಕೈಗೊಂಡ ಹಲವು ಯೋಜನೆಗಳು ಕೂಡಾ ವಿವಾದಕ್ಕೆ ತುತ್ತಾಗಿದ್ದವು. ಅಲ್ಲದೆ ಕೆಲವೊಂದು ಕೆಲಸಗಳಿಗೆ ಈ ಸಂಸ್ಥೆಗೆ ನಿರ್ಬಂಧ ಕೂಡಾ ಹೇರಲಾಗಿತ್ತು.

ನಂಟು:
ಮೈಸೂರು – ಬೆಂಗಳೂರು ನಡುವಿನ 117 ಕಿ.ಮೀ ಮಾರ್ಗದ ಎಕ್ಸ್ಪ್ರೆಸ್ ವೇ ಅನ್ನು 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಇದೇ ದಿಲೀಪ್ ಬಿಲ್ಡ್ಕಾನ್. ಇದರ ಜೊತೆಗೆ ಮಂಗಳೂರಿನ ಕೆತ್ತಿಕಲ್ನಲ್ಲಿ ತಡೆಗೋಡೆಯನ್ನೂ ನಿರ್ಮಿಸಿತ್ತು. ತಡೆಗೋಡೆ ನಿರ್ಮಾಣದ ವೇಳೆ ಅವೈಜ್ಞಾನಿಕವಾಗಿ ಮಣ್ಣು ವಿಲೇವಾರಿ ಮಾಡಿದ ಆರೋಪ ಕೂಡಾ ಕಂಪನಿ ಮೇಲಿದೆ.

ವಿವಾದ:
ಮೈಸೂರು- ಬೆಂಗಳೂರು ಹೆದ್ದಾರಿ ಉದ್ಘಾಟನೆ ಗೊಂಡ ಬೆನ್ನಲ್ಲೇ 3 ತಿಂಗಳಲ್ಲೇ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದಕ್ಕೆ ಹೆದ್ದಾರಿ ವಿನ್ಯಾಸದಲ್ಲಿ ದೋಷ, ರಸ್ತೆಗೆ ಪ್ರವೇಶ ಮತ್ತು ಹೊರಹೋಗುವ ದಾರಿಗಳ ವಿನ್ಯಾಸದಲ್ಲಿ ದೋಷ, ಹೆದ್ದಾರಿ ನಿರ್ಮಾಣ ವೇಳೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸದೇ ಇರುವುದು ಕಾರಣ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಇದೇ ಕಾಮಗಾರಿ ಹಣ ಬಿಡುಗಡೆಗೆ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಕಂಪನಿ ಕೆಲ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಇದೇ ಕಾರಣಕ್ಕೆ ಬೆಂಗಳೂರಿನ ಸುರಂಗ ರಸ್ತೆಗೆ ಬಿಡ್ ಸಲ್ಲಿಸುವುದರಿಂದ ಈ ಕಂಪನಿಯನ್ನು ಹೊರಗಿಡಲಾಗಿತ್ತು.


