ಅಯ್ಯಪ್ಪ ಸ್ವಾಮಿಗಳ ಪೂಜೆ ವೇಳೆ ದನಕ್ಕೆ ಚೂರಿ ಇರಿತ ಪ್ರಕರಣ:ರಸ್ತೆಗೆ ದನ ಬಿಟ್ಟವರ ಮೇಲೂ ಸುಮೊಟೋ ಕೇಸು

ಮಂಗಳೂರು :ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯ ಚರುಮುರಿ ಸ್ಟಾಲ್ ಬಳಿ ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿದ ಪ್ರಕರಣದಲ್ಲಿ ರಸ್ತೆಗೆ ದನ ಬಿಟ್ಟವರ ಮೇಲೂ ಸುಮೊಟೋ ಕೇಸು ದಾಖಲಾಗಿದೆ.ಎಡಪದವು ಬಳಿಯ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಾಲಾಧಾರಿಗಳ ಪೂಜಾ ಕಾರ್ಯಕ್ರಮಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಚರುಮುರಿ ಹಾಕಿದ್ದು ಈ ವೇಳೆ ಅಲ್ಲಿಗೆ ಬಂದ ದನದ ಮುಖಕ್ಕೆ ಚೂರಿಯಿಂದ ಇರಿದ ಘಟನೆ ನಡೆದಿತ್ತು.

ಚರುಮುರಿ ಸ್ಟಾಲ್ ಇರಿಸಿದ್ದಾಗ ಅಲ್ಲಿಗೆ ದನವೊಂದು ಬಂದಿದ್ದು ಟೊಮೆಟೋ ತಿನ್ನಲು ಮುಂದಾಗಿತ್ತು. ಈ ವೇಳೆ, ವ್ಯಕ್ತಿ ಕೋಪಗೊಂಡು ಟೊಮೆಟೋ ಕೊಯ್ಯುವ ಹರಿತ ಚೂರಿಯಲ್ಲಿ ದನದ ಮುಖಕ್ಕೆ ಬೀಸಿದ್ದು ಮುಖದ ಭಾಗದಲ್ಲಿ ಎರಡು ಇಂಚು ಆಳದ ಗಾಯವಾಗಿ ರಕ್ತ ಹರಿದಿತ್ತು.ಚೂರಿ ಇರಿದ ವ್ಯಕ್ತಿಯನ್ನು ಚರಮುರಿ ಸ್ಟಾಲ್ ನ ಉಮರಬ್ಬ ಎಂದು ತಿಳಿದುಬಂದಿದೆ. ಈತ ಜಾತ್ರೆಯ ವೇಳೆ ಹಲವೆಡೆ ಚರುಮುರಿ ಸ್ಟಾಲ್ ಹಾಕಿ ವ್ಯಾಪಾರ ನಡೆಸುತ್ತಿದ್ದು ದನಕ್ಕೆ ಕತ್ತಿಯಿಂದ ಇರಿದ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ದನವನ್ನು ಹಿಡಿದು ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಘಟನೆ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ. ಬಜರಂಗದಳ ಜಿಲ್ಲಾ ಮುಖಂಡರು ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸ್ ಕಮಿಷನ‌ರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಆಕಸ್ಮಿಕವಾಗಿ ಘಟನೆ ಆಗಿದೆ. ದನವನ್ನು ಸಾರ್ವಜನಿಕ ಪ್ರದೇಶದಲ್ಲಿ ಬಿಟ್ಟಿರುವುದು ತಪ್ಪು. ಹಾಗಾಗಿ ಅದರ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಮತ್ತು ದನದ ಮೇಲೆ ಕ್ರೌರ್ಯ ತೋರಿಸಿದ್ದಕ್ಕಾಗಿ ಚೂರಿ ಬೀಸಿದ ವ್ಯಕ್ತಿಯ ವಿರುದ್ಧ ಸುಮೊಟೋ ಕೇಸು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!