ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮಾ ಬಯಲು

ಪುತ್ತೂರು:ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮಾ ಇದೀಗ ಬಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿತ್ತು ಎನ್ನಲಾದ ಕಿಡ್ನಾಪ್ ಯತ್ನ ಪ್ರಕರಣದಲ್ಲಿ, ಇದು ಸಂಪೂರ್ಣ ನಾಟಕ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.ಮಂಗಳೂರು ಪಿಯುಸಿ ಕಾಲೇಜಿಗೆ ಸೇರ್ಪಡೆ ಪಡೆಯುವ ಉದ್ದೇಶದಿಂದ ವಿದ್ಯಾರ್ಥಿನಿಯೇ ಕಿಡ್ನಾಪ್ ಹೈಡ್ರಾಮಾ ಸೃಷ್ಟಿಸಿದ್ದಾಳೆ ಎಂಬುದು ತಿಳಿದುಬಂದಿದೆ. ಬ್ಲೇಡ್ ಬಳಸಿ ಕೈಗೆ ಸಣ್ಣ ಗಾಯ ಮಾಡಿಕೊಂಡು ಕಿಡ್ನಾಪ್ ನಡೆದಂತೆ ತೋರಿಸಲು ಯತ್ನಿಸಿದ್ದಾಳೆ.

ಘಟನೆಗೆ ನಾಟಕೀಯ ತಿರುವು ನೀಡಲು ವಿದ್ಯಾರ್ಥಿನಿ ತನ್ನ ಶಾಲಾ ಬ್ಯಾಗ್‌ನಲ್ಲಿದ್ದ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿ, ಬಳಿಕ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಳು. ಅಲ್ಲದೇ ಸ್ಕೂಟಿಯನ್ನು ನಿಲ್ಲಿಸಿ ಕೈ ಕುಯ್ದುಕೊಂಡು ಅಪಹರಣದ ನಾಟಕವನ್ನಾಡಿದ್ದಾಳೆ.ನಿನ್ನೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ದಿನ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಥಳಕ್ಕೆ ಸ್ಥಳೀಯ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಬಾಲಕಿಯನ್ನು ವಿಚಾರಿಸಿದ್ದರು. ಮಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳೂ ದೌಡಾಯಿಸಿದ್ದರು.

ತನಿಖೆ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಕೊನೆಗೂ ಸತ್ಯ ತಿಳಿದುಬಂದಿದ್ದು, ವಿಚಾರಣೆ ವೇಳೆ ಬಾಲಕಿಯೇ ಸಂಪೂರ್ಣ ಘಟನೆ ಬಗ್ಗೆ ಒಪ್ಪಿಕೊಂಡಿದ್ದಾಳೆ. ಇದೀಗ ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!