ತಲಪಾಡಿ ಟೋಲ್ಗೇಟ್ ಸಮೀಪ ಸಂಭವಿಸಿದ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ‘ಬ್ರೇಕ್ ವೈಫಲ್ಯ’ ಎಂಬ ವದಂತಿಗಳು ಹರಡುತ್ತಿದ್ದರೂ, ಕೆಎಸ್ಆರ್ಟಿಸಿ ಈ ಅಪಘಾತಕ್ಕೆ ಬಸ್ನ ತಾಂತ್ರಿಕ ದೋಷ ಅಥವಾ ಬ್ರೇಕ್ ವೈಫಲ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ. ಇಲಾಖೆಯ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಬಸ್ ಸಂಪೂರ್ಣವಾಗಿ ಫಿಟ್ ಆಗಿತ್ತು ಹಾಗೂ ಇತ್ತೀಚೆಗೆ ಎಫ್ಸಿ ನವೀಕರಣವೂ ಮಾಡಿಕೊಂಡಿತ್ತು ಎಂಬುದು ದೃಢವಾಗಿದೆ. ಬಸ್ ಚಾಲಕನ ಅಜಾಗರೂಕ, ನಿರ್ಲಕ್ಷ್ಯಪೂರ್ಣ ಹಾಗೂ ಅತಿವೇಗದ ಚಾಲನೆಯೇ ಈ ದುರ್ಘಟನೆಗೆ ಕಾರಣವಾಗಿದ್ದು, ಈಗಾಗಲೇ ಚಾಲಕನ ವಿರುದ್ಧ ತನಿಖೆ ಮುಂದುವರೆದಿದೆ.
ತನಿಖೆಯ ಪ್ರಕಾರ, ಮಂಗಳೂರು-1ನೇ ಘಟಕದ ಚಾಲಕ ನಿಜಲಿಂಗಪ್ಪ ಚಲವಾದಿ ಅವರು ಕಾಸರಗೋಡಿನಿಂದ ಮಂಗಳೂರಿಗೆ ಬಸ್ ಚಲಾಯಿಸುತ್ತಿದ್ದರು. ಮಧ್ಯಾಹ್ನ 1:45ರ ಸುಮಾರಿಗೆ, ಇಳಿಜಾರಿನಲ್ಲಿ ತಲಪಾಡಿ ಟೋಲ್ ಗೇಟ್ ಸಮೀಪಿಸುತ್ತಿದ್ದಾಗ ಅವರು ಬಸ್ ಅನ್ನು ಅತಿ ವೇಗವಾಗಿ ಚಲಾಯಿಸಿದ್ದಾರೆ. ಆಟೋರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಅವರು ಬ್ರೇಕ್ ಹಾಕಿದ್ದಾರೆ, ಆದರೆ ಬಸ್ ಆಟೋಗೆ ಡಿಕ್ಕಿ ಹೊಡೆದು, ಜಾರಿ ಪಲ್ಟಿಯಾಗಿದೆ.
ಗಾಬರಿಗೊಂಡ ಚಾಲಕ ವಾಹನವನ್ನು ತೊರೆದು ಪರಾರಿಯಾಗಿದ್ದಾನೆ. ಪರಿಣಾಮವಾಗಿ, ಚಾಲಕನಿಲ್ಲದ ಬಸ್ ಇಳಿಜಾರಿನಲ್ಲಿ ಹಿಂದಕ್ಕೆ ಉರುಳಿ, ನಿಲ್ಲಿಸಿದ್ದ ಆಟೋರಿಕ್ಷಾ ಮತ್ತು ಬಸ್ಗಾಗಿ ಕಾಯುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.ಸಾಮಾಜಿಕ ಜಾಲತಾಣ ಮತ್ತು ಕೆಲವು ಮಾಧ್ಯಮಗಳಲ್ಲಿ ಕಳಪೆ ವಾಹನ ನಿರ್ವಹಣೆಯ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಕೆಎಸ್ಆರ್ಟಿಸಿ, ವಾಹನಕ್ಕೆ ಬ್ರೇಕ್ ವೈಫಲ್ಯ ಅಥವಾ ಯಾವುದೇ ತಾಂತ್ರಿಕ ದೋಷ ಇರಲಿಲ್ಲ ಎಂದು ತಿಳಿಸಿದೆ.
ಅಪಘಾತ ಪರಿಹಾರ ನಿಧಿಯಿಂದ ಮೃತರಾದ ಆಟೋ ಪ್ರಯಾಣಿಕರ ಕಾನೂನುಬದ್ಧ ವಾರಸುದಾರರಿಗೆ ತಕ್ಷಣದ/ಅಂತರ ಪರಿಹಾರವಾಗಿ ತಲಾ 1 ಲಕ್ಷ ರೂ. ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಗಾಯಗೊಂಡ ಇಬ್ಬರು ಪಾದಚಾರಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲ ವೈದ್ಯಕೀಯ ವೆಚ್ಚವನ್ನು ಕೆಎಸ್ಆರ್ಟಿಸಿ ಭರಿಸಲಿದೆ.
ಕೆಎಸ್ಆರ್ಟಿಸಿ ತಾಂತ್ರಿಕ ತಂಡವು ಅಪಘಾತ ಸ್ಥಳದಲ್ಲಿ ವಾಹನವನ್ನು ಪರಿಶೀಲಿಸಿದ್ದು, ಅದು ಉತ್ತಮ ಸ್ಥಿತಿಯಲ್ಲಿತ್ತು ಮತ್ತು ಯಾವುದೇ ದೋಷವಿರಲಿಲ್ಲ ಎಂದು ದೃಢಪಡಿಸಿದೆ. ಹೆಚ್ಚುವರಿಯಾಗಿ, ಮತ್ತೊಬ್ಬ ಚಾಲಕ ಬಸ್ ಅನ್ನು ಅಪಘಾತ ಸ್ಥಳದಿಂದ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.
“ಈ ದುರ್ಘಟನೆ ಚಾಲಕನ ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಮಾತ್ರ ಸಂಭವಿಸಿದೆ. ಬ್ರೇಕ್ ವೈಫಲ್ಯ ಅಥವಾ ಯಾವುದೇ ತಾಂತ್ರಿಕ ದೋಷದಿಂದಲ್ಲ” ಎಂದು ಕೆಎಸ್ಆರ್ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಕರು ಸ್ಪಷ್ಟಪಡಿಸಿದ್ದಾರೆ.