ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 10ನೇ ಗಮಕ ಕಲಾ ಸಮ್ಮೇಳನ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅ.17 ಮತ್ತು 18ರಂದು ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರವಚನಗಾರ, ಸಾಹಿತಿ, ಹಿರಿಯ ವಿದ್ವಾಂಸ ಮುಳಿಯ ಶಂಕರ ಭಟ್ಟ ಅವರು ವಹಿಸಲಿದ್ದಾರೆ ಎಂದು ಸಮ್ಮೇಳನದ ಗೌರವ ಮಾರ್ಗದರ್ಶಕ ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು.
ಅವರು ಪತ್ರಿಕಾಭವನದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಅ.17 ರಂದು ಮಧ್ಯಾಹ್ನ 2.30ಕ್ಕೆ ಒಡಿಯೂರಿನ ಸಾಧ್ಯ ಶ್ರೀ ಮಾತಾನಂದಮಯೀ ಉಪಸ್ಥಿತಿಯಲ್ಲಿ ಡಾ.ಹರಿಕೃಷ್ಣ ಪುನರೂರು ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ನೆನಪಿನ ಸಂಚಿಕೆ ‘ಗಮಕ ಗಂಗಾಧರ’ ಅನಾವರಣ ಮಾಡಲಿದ್ದಾರೆ.
ಗಮಕ ಕಲಾ ಸಮ್ಮೇಳನದಲ್ಲಿ ನವರಸ ಗಮಕ, ಕಾವ್ಯ ಗಾಯನ, ಗಮಕ ಸಂವಾದ ಗೋಷ್ಠಿ, ಗಮಕ ವೈಭವ, ಹರಿದಾಸ ಪಾವಂಜೆ ಲಕ್ಷ್ಮೀ ನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ, ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಬಾಸ್ತಿ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಅ.18ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ತಾಳಜಿ ವಸಂತ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಕಾರ್ಯಾಧ್ಯಕ್ಷ ಪ್ರೊ.ವೇದವ್ಯಾಸ ರಾಮಕುಂಜ, ಭವಾನಿಶಂಕರ ಶೆಟ್ಟಿ, ಮಹಾಲಿಂಗ ಭಟ್ ಉಪಸ್ಥಿತರಿದ್ದರು.