ಮಂಗಳೂರು : ಇಂಡಿಯಾನಾ ಆಸ್ಪತ್ರೆಯಲ್ಲಿ ಆರಂಭಗೊಂಡ ಲೇಸರ್ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯು ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಸೌಲಭ್ಯ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಭಗವಾನ್ ಬಿ.ಸಿ. ಶ್ಲಾಘಿಸಿದ್ದಾರೆ.ಮಂಗಳೂರಿನ ಇಂಡಿಯಾನಾ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್ಸ್ಟಿಟ್ಯೂಟ್ ಆರಂಭಿಸಿರುವ ಹೈ ಪ್ರಿಸಿಶನ್ ಲೇಸರ್ ಆಂಜಿಯೋಪ್ಲಾಸ್ಟಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆ ಯುವ ಜನರಲ್ಲಿ ಹೆಚ್ಚುತ್ತಿದೆ.ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನ ಪದ್ಧತಿ, ವಂಶ ಪಾರಂಪರ್ಯವಾಗಿ ಬಂದಿರುವ ಕೆಲವು ಕಾರಣಗಳಿವೆ. ಪ್ರಸಕ್ತ ಕಾಲಘಟ್ಟದಲ್ಲಿ ಉತ್ತಮ ಆರೋಗ್ಯ ಮತ್ತು ದೀರ್ಘ ಆಯುಷ್ಯದ ಬಗ್ಗೆ ಚಿಂತನೆ ನಡೆಯುತ್ತಿದೆ. ಇಂಡಿಯಾನಾ ಆಸ್ಪತ್ರೆಯಲ್ಲಿ ಲೇಸರ್ ಮೂಲಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಸಾಕಷ್ಟು ಹೃದ್ರೋಗಿಗಳಿಗೆ ಸಹಕಾರಿಯಾಗಲಿದೆ ಎಂದು ಡಾ.ಭಗವಾನ್ ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಇಂಡಿಯಾನಾ ಹಾಸ್ಪಿಟಲ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಇಂಟರ್ವೆನ್ಯನಲ್ ಕಾರ್ಡಿಯಾಲಜಿಸ್ಟ್ ಡಾ.ಯೂಸುಫ್ ಎ. ಕುಂಬಳೆ, ಲೇಸರ್ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಇಂಡಿಯಾನಾ ಆಸ್ಪತ್ರೆ ಆರಂಭಿಸಿದೆ. ಇದು ಹೃದ್ರೋಗ ಚಿಕಿತ್ಸೆಯಲ್ಲಿ ಮತ್ತೊಂದು ಮಹತ್ವದ ಮುನ್ನಡೆ ಎಂದರು.
ಸಾಮಾನ್ಯವಾಗಿ, ಹೆಚ್ಚಿನ ಹೃದಯ ಬ್ಲಾಕ್ಗಳಿಗೆ ಬೈಪಾಸ್ ಶಸ್ತ್ರಚಿಕಿತ್ಸೆಯೇ ಅಂತಿಮ ಆಯ್ಕೆಯಾಗಿತ್ತು. ಆದರೆ ಸೈಂಟಿಂಗ್ ಹಾಗೂ ಇತರ ಇಂಟರ್ವೆನ್ನನಲ್ ಕಾರ್ಡಿಯಾಲಜಿ ತಂತ್ರಜ್ಞಾನಗಳ ಅಭಿವೃದ್ಧಿಯಿಂದ ಇಂದು ಕೇವಲ ಶೇ.10 ರೋಗಿಗಳಿಗೆ ಮಾತ್ರ ಬೈಪಾಸ್ ಅಗತ್ಯವಿದೆ. ದೇಶದಲ್ಲಿ ವೇಗವಾಗಿ ಗುಣಮುಖರಾಗಲು ಮತ್ತು ಸುರಕ್ಷಿತ ಚಿಕಿತ್ಸೆ ಬಯಸುವ ರೋಗಿಗಳಿಗೆ ಲೇಸರ್ ಆ್ಯಂಜಿಯೋಪ್ಲಾಸ್ಟಿ ಮುಂದಿನ ದಿನಗಳಲ್ಲಿ ಪ್ರಮುಖ ಚಿಕಿತ್ಸಾ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರಸಕ್ತ ಲಭ್ಯವಾಗಿರುವ ಲೇಸರ್ಆ್ಯಂಜಿಯೋಪ್ಲಾಸ್ಟಿ ಮುಂದಿನ ದಿನಗಳಲ್ಲಿ ಹೃದ್ರೋಗ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದೂ ಡಾ.ಯೂಸುಫ್ ಕುಂಬಳೆ ಹೇಳಿದರು.
ಈ ತಂತ್ರಜ್ಞಾನವು ಬ್ಲಾಕೇಜ್ ಸುತ್ತಲಿನ ಆರೋಗ್ಯಕರ ಕಣಗಳಿಗೆ ಮಾಡುವ ಹಾನಿ ಅತ್ಯಲ್ಪ ಪ್ರಮಾಣದ್ದಾಗಿರುತ್ತದೆ. ಅತಿ ನಿಖರವಾದ ಚಿಕಿತ್ಸೆಯನ್ನು ನೀಡಲು ಇದರಿಂದ ಸಾಧ್ಯವಾಗುತ್ತದೆ. ಸಾಮಾನ್ಯ ಬಲೂನ್ ಆ್ಯಂಜಿಯೋಪ್ಲಾಸ್ಟಿಗಿಂತ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಲೇಸರ್ ಆ್ಯಂಜಿಯೋಪ್ಲಾಸ್ಟಿ ಕಠಿಣ ಹೃದಯ ಸಮಸ್ಯೆಗಳಲ್ಲಿ ಹೆಚ್ಚಿನ ಯಶಸ್ಸು ಹಾಗೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇನ್-ಸೈಂಟ್ ರೀಸ್ಟೆನೋಸಿಸ್ ಪ್ರಕರಣಗಳಲ್ಲಿ ಇದು ಗಮನಾರ್ಹ ಸುಧಾರಣೆಯನ್ನು ತೋರಿಸಿದ್ದು, ಅನೇಕ ಬಾರಿ ಹೆಚ್ಚುವರಿ ಸ್ಟೆಂಟ್ ಅಳವಡಿಕೆಯ ಅಗತ್ಯವನ್ನೇ ಕಡಿಮೆ ಮಾಡುತ್ತದೆ ಎಂದರು.
ಇಂಡಿಯಾನಾ ಆಸ್ಪತ್ರೆಯು ವೈದ್ಯಕೀಯ ಮೈಲಿಗಲ್ಲುಗಳ ವಿಶಿಷ್ಟ ದಾಖಲೆಯನ್ನು ಹೊಂದಿದೆ. ಅದು ಮೊದಲ ಒಸಿಟಿ ಇಂಪ್ಲಾಂಟೇಶನ್ ಅನ್ನು ನಡೆಸಿತು. ಅದು ಒಂದು ವರ್ಷದ ಮಗುವಿನ ಮೇಲೆ ಮಹಾಪಧಮನಿಯ ಸ್ಟೆನೋಸಿಸ್ಗೆ ಮೊದಲ ಮಕ್ಕಳ ಶಸ್ತ್ರ ಚಿಕಿತ್ಸೆಯಾಗಿದೆ. ಈ ಪ್ರದೇಶದಲ್ಲಿ ಮೊದಲ ವಾಲ್ಟ್-ಇನ್-ವಾಲ್ಟ್ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಅದರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾದ ತಂಡವು 12 ಗಂಟೆಗಳ ನವಜಾತ ಶಿಶುವಿನ ಮೇಲೆ ಮಹಾಪಧಮನಿಯ ವಾಲ್ಲೋಟಮಿಯನ್ನು ನಡೆಸುವ ಮೂಲಕ ಶಿಶುವಿನ ಜೀವ ಉಳಿಸಿತು. ಸುಧಾರಿತ ಹೃದಯರಕ್ತನಾಳದ ಆರೈಕೆಯಲ್ಲಿ ಇಂಡಿಯಾನಾ ಆಸ್ಪತ್ರೆ 2019 ರಲ್ಲಿ ಕರಾವಳಿ ಕರ್ನಾಟಕದ ಮೊದಲ ಟ್ರಾನ್ಸ್-ಕ್ಯಾತಿಟರ್ ಮಹಾಪಧಮನಿಯ ಕವಾಟ ಬದಲಿಯನ್ನು ನಡೆಸಿತು ಎಂದರು.
ಇದೇವೇಳೆ ಫಾತಿಮಾ ಫೌಂಡೇಶನ್ ವತಿಯಿಂದ ಇಂಡಿಯಾನಾ ಹಾಸ್ಪಿಟಲ್ ಎಂ.ಡಿ. ಡಾ.ಯೂಸುಫ್ ಕುಂಬ್ಳೆಯವರನ್ನು ಸನ್ಮಾನಿಸಲಾಯಿತು. ಎಂ.ಬಿ.ಸದಾಶಿವ ಸನ್ಮಾನಿತರನ್ನು ಪರಿಚಯಿಸಿದರು.
ಇಂಡಿಯಾನಾ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್ಸ್ಟಿಟ್ಯೂಟ್ನ ಚೇರ್ಮ್ಯಾನ್ ಪ್ರೊ.ಡಾ.ಅಲಿ ಕುಂಬ್ಳೆ ನಿರ್ದೇಶಕ ಡಾ.ನಿಹಾಲ್ ಅಲಿ ಕುಂಬ್ಳೆ, ವೈದ್ಯಕೀಯ ನಿರ್ದೇಶಕ ಡಾ.ಅಪೂರ್ವಾ ಶ್ರೀಜಯದೇವ್, ವೈದ್ಯಕೀಯ ಮೆಡಿಕಲ್ ಅಡ್ಮಿನಿಸ್ಟೇಶನ್ ನಿರ್ದೇಶಕ ಡಾ.ಆದಿತ್ಯ ಭಾರಧ್ವಾಜ್, ಹೃದ್ರೋಗ ತಜ್ಞ ಆರ್.ಎಲ್. ಕಾಮತ್ ಹಾಗೂ ಹಿರಿಯ ವೈದ್ಯ ಡಾ.ಮುಹಮ್ಮದ್ ಇಸ್ಮಾಯೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.