7 ವರ್ಷದಿಂದ ದುಡಿಸಿ ಸಂಬಳ ನೀಡದ ಬೀಡಿ ಮಾಲಕರ ವಿರುದ್ಧ ಮತ್ತು ಕನಿಷ್ಟ ಕೂಲಿ ಜಾರಿ ಮಾಡದ್ದರ ವಿರುದ್ಧ ಬೀಡಿ ಕಾರ್ಮಿಕರ ಪ್ರತಿಭಟನೆ

ಮಂಗಳೂರು: 01.04.2024 ರಿಂದ ಸರಕಾರ ನಿಗದಿ ಪಡಿಸಿ ಆದೇಶ ಮಾಡಿದ ಕನಿಷ್ಠ ಕೂಲಿಯನ್ನು ಕೂಡಾ ಬೀಡಿ ಮಾಲಕರು ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.ಅವರು ಇಂದು ಮಂಗಳೂರು ಸಹಾಯಕ ಕಾರ್ಮಿಕ ಇಲಾಖೆಯಲ್ಲಿ ನಡೆದ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರಿಗೆ ಈಗ ಇದ್ದ ವೇತನವನ್ನು ಹಿಮ್ಮುಖ ಗೊಳಿಸಿ, ಸರಕಾರ ಮಾಲಕರ ಪರವಾಗಿ ಆದೇಶ ಮಾಡಿದ್ದರೂ ಬೀಡಿ ಮಾಲಕರು ಆ ಕೂಲಿಯನ್ನೂ ಕೂಡಾ ಜಾರಿ ಮಾಡದೆ ನಿರಂತರ ಬೀಡಿ ಕಾರ್ಮಿಕರನ್ನು ವಂಚಿಸುತ್ತಾ ಬರುತ್ತಿದ್ದಾರೆ ಎಂದರು. ಇದನ್ನು ಸಿಐಟಿಯು ಎಂದೂ ಸಹಿಸಲು ಸಾದ್ಯವಿಲ್ಲ ಎಂದರು.

ಬಳಿಕ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಅವರು ಸರಕಾರ ನಿಗದಿಗೊಳಿಸಿದ ಕಾನೂನು ಬದ್ಧ ವೇತನ, ತುಟ್ಟಿಭತ್ಯೆ, ಎಲ್ಲವನ್ನೂ ವಂಚಿಸುತ್ತಾ, ದೇಶದ ಕಾನೂನಿಗೆ ಗೌರವವನ್ನೇ ನೀಡದ ಬಿಡೀ ಮಾಲಕರು, ಬೀಡಿ ಕಟ್ಟಿಸಿ ಬಡ ಮಹಿಳೆಯರನ್ನು ವಂಚಿಸುವುದರ ವಿರುದ್ಧ ಕ್ರಮ ಕೈಗೊಳ್ಳಲಾಗದ ರಾಜಕೀಯದಡಿ ನಾವಿರುವಂತಾಗಿರುವುದು ನಮ್ಮ ದುರಂತ ಎಂದರು. ನಮ್ಮ ಬದುಕಿಗೆ ಆಸರೆ ಆಗಿ ಎಂದು ಮತ ನೀಡಿ ಗೆಲ್ಲಿಸಿದ ನಮ್ಮ ಶಾಸಕ ಸಂಸದರು ನಾವು ದುಡಿದಿದ್ದಕ್ಕೆ ವೇತನ ನೀಡದೆ ವಂಚಿಸುವ ಬೀಡಿ ಮಾಲಕರ ರಕ್ಷಣೆಗೆ ನಿಂತಿದ್ದಾರೆ ಎಂದರೆ ಇಂತಹ ರಾಜಕೀಯವನ್ನು ಸೋಲಿಸುವುದು ನಮ್ಮೆಲ್ಲರ ಪ್ರಥಮ ಗುರಿಯಾಗಬೇಕು ಮತ್ತು ಆ ಮೂಲಕ ನಾವು ನಮ್ಮ ಬಾಕಿ ವೇತನವನ್ನು ಪಡೆಯಲು ಸಿದ್ದರಾಗಬೇಕು ಎಂದವರು ಕಾರ್ಮಿಕರಿಗೆ ಕರೆ ನೀಡಿದರು. ಇನ್ನು ಒಂದು ವಾರದ ಒಳಗೆ ಪ್ರತಿ 1000 ಬೀಡಿಗೆ ತಲಾ ರೂ 40 ರಂತೆ ಬಾಕಿ ಇರುವ ವೇತನವನ್ನು ಪಾವತಿಸದಿದ್ದರೆ 8.12.2025 ರಂದು ಜಿಲ್ಲಾ ಕೇಂದ್ರದಲ್ಲಿ ಬೀಡಿ ಕಾರ್ಮಿಕರನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದವರು ಎಚ್ಚರ ನೀಡಿದರು.

ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಸುಕುಮಾರ್ ಅವರು ಮಾತಾಡುತ್ತಾ ಹಲವು ತ್ಯಾಗಬಲಿದಾನಗಳಿಂದ ಪಡೆದ ಕಾನೂನು ಸೌಲಬ್ಯಗಳನ್ನು ಈ ರೀತಿ ವಂಚಿಸಲು ಸಿಐಟಿಯು ಅವಕಾಶ ಕೊಡುವುದಿಲ್ಲ ಎಂದರು. ಕಳೆದ 7 ವರ್ಷಗಳಿಂದ ಕಟ್ಡಿದ ಪ್ರತಿ ಸಾವಿರ ಬೀಡಿ ವೇತನದಲ್ಲಿ ತಲಾ ರೂ 40 ರಂತೆ ಬಾಕಿ ಮಾಡಿದ್ದ ಬೀಡಿ ಮಾಲಕರ ಪೈಕಿ ಗಣೇಶ್ ಬೀಡಿ ಮಾಲಕರು ಚಿಲ್ಲರೆ ಹಣ ನೀಡಿ ಕಾರ್ಮಿಕರ ಸಹಿ ಪಡೆದು ವಂಚಿಸುವುದನ್ನು ಖಂಡಿಸಿದರು ಮತ್ತು ಅದನ್ನು ತಡೆಯಲು ತಕರಷಣ ಮದ್ಯ ಪ್ರವೇಶ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು.ಈ ಸಂದರ್ಭ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ , ಸಿಐಟಿಯು ಮುಖಂಡರುಗಳಾದ ವಸಂತ ಆಚಾರಿ, ಜಯಂತಿ ಬಿ ಶೆಟ್ಟಿ, ಈಶ್ವರಿ ಪದ್ಮುಂಜ ಮೊದಲಾದವರು ಮಾತಾಡಿದರು.

ಹೋರಾಟದ ನೇತೃತ್ವದಲ್ಲಿ ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಜಯಂತ್ ನಾಯ್ಕ, ಲೋಲಾಕ್ಷಿ, ಭಾರತಿ ಬೋಳಾರ, ಜಯಶ್ರೀ ಬೆಳ್ತಂಗಡಿ, ಗಿರಿಜ ಮೂಡಬಿದ್ರೆ, ಲಕ್ಷ್ಮಿ, ಜಯಲಕ್ಷ್ಮಿ, citu ದ.ಕ. ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ನೋಣಯ ಗೌಡ, ಹೊನ್ನಯ ಅಮೀನ್, ಭವಾನಿ, ಉದಯ ಕುಮಾರ್, ಚಂದ್ರ ಪೂಜಾರಿ, ಉಡುಪಿ ಜಿಲ್ಲೆಯ ಮುಖಂಡರುಗಳಾದ ಕವಿರಾಜ್, ಸುನೀತ, ಉಮೇಶ್ ಕುಂದರ್, ಬಲ್ಕಿಸ್, ಕೆ. ಯಾಧವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೋದಿನಿ, ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಮೊದಲಾದವರು ಇದ್ದರು.

ಈ ಸಂದರ್ಭ ಕರ್ನಾಟಕ ಸರಕಾರದ ಅಪರ ಕಾರ್ಮಿಕ ಆಯುಕ್ತರಾದ ಶ್ರೀ ರವಿ ಕುಮಾರ್ ಅವರು ಬಂದು ಬೀಡಿ ಕಾರ್ಮಿಕರಿಗೆ ಅನ್ಯಾಯ ಆಗುವುದನ್ನು ಸರಕಾರ ಸಹಿಸುವುದಿಲ್ಲ , ತಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಮತ್ತು ಸರಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಸ್ವಲ್ಪ ಹಣ ನೀಡಿ ಕಾರ್ಮಿಕರ ಸಹಿ ಪಡೆಯುವುದನ್ನು ತಡೆಯುವುದಾಗಿ ಭರವಸೆ ನೀಡಿದರು. ಹಾಗೂ ಈ ಬಗ್ಗೆ ಗಣೇಶ್ ಬೀಡಿ ಮಾಲಕರಿಗೆ ಪತ್ರ ಕಳುಹಿಸುವುದಾಗಿ ಕೂಡಾ ಅವರು ಹೇಳಿದರು. ಇವರ ಜೊತೆ ಉಪ ಕಾರ್ಮಿಕ ಆಯುಕ್ತರಾದ ಗುರು ಪ್ರಸಾದ್, ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀಮತಿ ನಾಜೀಯ ಸುಲ್ತಾನ್ ಹಾಗೂ ಕಾರ್ಮಿಕ ಅಧಿಕಾರಿಗಳು ಇದ್ದರು.ಮೊದಲಿಗೆ ಎಲ್ಲರನ್ನೂ ಫೆಡರೇಶನ್ ಖಜಾಂಜಿಯಾದ ಸದಾಶಿವ ದಾಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!