ಮಂಜೇಶ್ವರ: ಮಂಜೇಶ್ವರ ತೊಮಿನಾಡು ಹಿಲ್ಟಾಪ್ನಲ್ಲಿ ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಕಲಹದಿಂದ ಮೃತಪಟ್ಟ ಜುಮ್ಲಾ ಮತ್ತು ಆಕೆಯ ಚಿಕ್ಕಪ್ಪ ಶೇಕುಂಞ ಅವರ ಮೃತದೇಹಗಳನ್ನು ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಅಂಗಳದಲ್ಲಿ ದಫನ ಮಾಡಲಾಯಿತು.
ಸೋಮವಾರ ಶೇಕುಂಞ ಅವರ ಮನೆಯಲ್ಲಿ ನಡೆದ ಹಲ್ಲೆಯ ವೇಳೆ ತಂದೆಯ ಇರಿತಕ್ಕೆ ಒಳಗಾದ ಜುಮ್ಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಅವರು ಸಾವನ್ನಪ್ಪಿದ್ದಾರೆ.
ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಜಗಳವೇ ಈ ದುರ್ಘಟನೆಯ ಮೂಲ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಉಮರ್ ಫಾರೂಖ್ ತನ್ನ ಹೆಂಡತಿಯ ತಂಗಿಯ ಪತಿ ಶೇಕುಂಞ ಮೇಲೆ ಹಲ್ಲೆ ನಡೆಸಿದ ವೇಳೆ, ಮಧ್ಯೆ ಪ್ರವೇಶಿಸಿದ ಮಗಳಿಗೂ ಗಂಭೀರ ಇರಿತ ಗಾಯಗಳಾಗಿದ್ದವು.
ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪೋಸ್ಟ್ಮಾರ್ಟಂ ನಡೆಸಿದ ಬಳಿಕ ಮಂಗಳವಾರ ಸಂಜೆ ತೊಮಿನಾಡಿನಲ್ಲಿರುವ ಮನೆಗೆ ತಂದು ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಮಯ್ಯುತ್ ನಮಾಜಿನ ಬಳಿಕ ದಫನ ಮಾಡಲಾಯಿತು.
ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಗಣಿಸಿ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.