ಕುಂಬಳೆ : ಮಂಗಲ್ಪಾಡಿ ಅಡ್ಕ ಪ್ರದೇಶದಲ್ಲಿ 23.4 ಲೀಟರ್ ಕರ್ನಾಟಕ ವಿದೇಶಿ ಮದ್ಯದೊಂದಿಗೆ ಯುವಕನನ್ನು ಕುಂಬಳೆ ಎಕ್ಸೈಸ್ ರೇಂಜ್ ಪ್ರಿವೆಂಟಿವ್ ಅಧಿಕಾರಿ ಜಿಜಿನ್ ಎಂ.ವಿ. ಅವರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಲ್ಪಾಡಿ ಅಡ್ಕ ಭಗವತಿ ನಗರ ನಿವಾಸಿ ಹರೀಶ್ ಎ. ಎಂದು ಗುರುತಿಸಲಾಗಿದೆ. ಅಡ್ಕ ಅಂಗನವಾಡಿ ಸಮೀಪ 180 ಮಿಲಿ ಗಾತ್ರದ 130 ಟೆಟ್ರಾ ಪ್ಯಾಕೆಟ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ದಾಳಿಯಲ್ಲಿ ಪ್ರಿವೆಂಟಿವ್ ಅಧಿಕಾರಿಗಳಾದ ಮೊಯ್ತೀನ್ ಸಾದಿಕ್, ಕಬೀರ್ ಹಾಗೂ ಸಿವಿಲ್ ಎಕ್ಸೈಸ್ ಅಧಿಕಾರಿ ಅವಿನಾಶ್ ಕೂಡ ಭಾಗವಹಿಸಿದ್ದರು. ಬಂಧಿತನನ್ನು ನಾಳೆ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಕ್ಸೈಸ್ ಇಲಾಖೆ ತಿಳಿಸಿದೆ.