ಮಂಜೇಶ್ವರ: ಅರಿಕ್ಕಾಡಿ ಟೋಲ್ ಗೇಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸುತಿದ್ದಂತೆ ಟೋಲ್ ಪ್ಲಾಜಾದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಆರೋಪಗಳು ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಕುಳತ್ತೂರು ಜೈಸಿಂಗ್ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ, ರಾಜ್ಯ ಡಿಜಿಪಿ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಮಾನವ ಹಕ್ಕು ಆಯೋಗವು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಟೋಲ್ ಪ್ಲಾಜಾದಲ್ಲಿ ಬೋವಿಕಾನ ಆಲೂರು ನಿವಾಸಿಯೊಬ್ಬರನ್ನು ಪೊಲೀಸರು ಕಾರಿನಿಂದ ಬಲವಂತವಾಗಿ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂಬ ಆರೋಪವನ್ನು ಪೊಲೀಸರು ಮಾಡಿದ್ದರೂ, ಸಿಸಿ ಟಿವಿ ದೃಶ್ಯಗಳು ಈ ಹೇಳಿಕೆಯನ್ನು ಖಂಡಿಸುತ್ತಿವೆ ಎನ್ನಲಾಗಿದೆ. ಮಹಿಳೆ ಮತ್ತು ಮಗುವನ್ನು ರಾತ್ರಿ ವೇಳೆ ರಸ್ತೆಯಲ್ಲಿ ಬಿಟ್ಟು, ಪುರುಷನನ್ನು ಅನ್ಯಾಯವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.