ತುಳುನಾಡ ಕೊಡುಗೈ ದಾನಿಯ ಹುಟ್ಟೂರ ಪ್ರೇಮ; ತನ್ನೂರ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು ದತ್ತು ಪಡೆದ ಡಾ. ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ

ಮಂಜೇಶ್ವರ : ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿರುವ ಅದೆಷ್ಟೋ ಜೀವಗಳಿವೆ. ಬಡತನ ಇನ್ನಷ್ಟು ಅವರ ಜೀವ ಹಿಂಡುತ್ತದೆ. ಯಾವುದಾದರೂ ಕಾಣುವ ಕೈಗಳ ಸಹಾಯಕ್ಕೆ ಕಾಯುತ್ತವೆ. ಆದರೆ ಎಲ್ಲರೂ ಮರುಗುವರೇ ಹೊರತು ಸಹಾಯಕ್ಕಾಗಿ ಮುಂದೆ ಬರುವುದು ವಿರಳ. ಇಂತಹ ಸಂದರ್ಭಗಳಲ್ಲಿ ನಮಗೆ ಹೊಳೆಯುವ ಹೆಸರೆಂದರೆ‌ ಅದು ಡಾ. ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ. ತಮ್ಮ ನಿಸ್ವಾರ್ಥವಾದ ಸಮಾಜ ಸೇವೆ ಇಂದು ಅವರನ್ನು ಬಹಳ ಎತ್ತರಕ್ಕೆ ತಂದು ನಿಲ್ಲಿಸಿದೆ.‌ ಜಾತಿ-ಮತ-ಧರ್ಮ ಎನ್ನುವ ಯಾವುದೇ ಭೇದವಿಲ್ಲದೆ ಸಮಾಜದಲ್ಲಿನ ಅಸಕ್ತರಿಗೆ ದಾರಿ ದೀಪವಾಗಿ ಬೆಳಗುತ್ತಿದ್ದಾರೆ. ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ ಶ್ರೀಯುತರು ತಾವು ಬೆಳೆದ ಹಾದಿಯನ್ನು ಮರೆಯಲಿಲ್ಲ.


ತನ್ನೂರಾದ ಕುಳೂರಿನ ಜನತೆಯ ದಾರಿದೀಪವಾಗಿ, ಹುಟ್ಟೂರ ಶಾಲೆಯ ಅಭಿವೃದ್ಧಿಯ ಹರಿಕಾರನಾಗಿ ಗುರುತಿಸಿಕೊಂಡಿರುವ ಶ್ರೀಯುತರು ತಾನು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಂತೆ ಹತ್ತು ಹಲವು ಕೊಡುಗೆಗಳನ್ನು ನೀಡಿ ಮಾದರಿಯಾಗಿದ್ದಾರೆ.


ಈ ವರ್ಷ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು 5 ವರ್ಷಗಳ ಕಾಲ ದತ್ತು ಸ್ವೀಕಾರ ಮಾಡುವ ಮೂಲಕ ಕುಳೂರಿನ ಜನಮಾನಸದಲ್ಲಿ ಅಜರಾಮರವಾಗಿರುವರು. ತೀರಾ ಗ್ರಾಮೀಣ ಭಾಗದಲ್ಲಿರುವ ತಾನು ಕಲಿತ ಸರಕಾರಿ ಶಾಲೆಯು ಇನ್ನಷ್ಟು ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಇಂದು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಪ್ರೀ ಪ್ರೈಮರಿ ವಿಭಾಗವನ್ನು ಮುಂದಿನ 5 ವರ್ಷಗಳ ಕಾಲ ದತ್ತು ಸ್ವೀಕಾರ ಮಾಡುವ ಮೂಲಕ ಗಮನ ಸೆಳೆದಿರುವರು.


ಇದೇ ಸಂದರ್ಭದಲ್ಲಿ ಶಾಲಾ ಪರವಾಗಿ ಅವರನ್ನು ಗೌರವಿಸಲಾಯಿತು.‌

SHARE
Loading spinner

Leave a Reply

Your email address will not be published. Required fields are marked *

error: Content is protected !!