ಕಾಸರಗೋಡು: ಸಾರ್ವಜನಿಕ ಆಸ್ತಿಯಾದ ಸೌರ ದೀಪಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರ ತಂಡವನ್ನು ಚಂದೇರ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.
ವಲಿಯಪರಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿಲಕಡಪ್ಪುರಂ, ಬಿಚ್ಚಾರಕಡವು ಪಾಡಲ್ ಕಡಪ್ಪುರ ಮತ್ತು ವಲಿಯಪರಂಬು ಸೇತುವೆ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸೌರ ದೀಪಗಳ ಬ್ಯಾಟರಿಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಸುಮಾರು 80,000 ರೂ. ಮೌಲ್ಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ದೋಚಿದ್ದ ಈ ತಂಡದ ಕೃತ್ಯದಿಂದ ಸ್ಥಳೀಯ ಆಡಳಿತಕ್ಕೆ ಭಾರಿ ನಷ್ಟ ಉಂಟಾಗಿತ್ತು. ಪಂಚಾಯತ್ ಕಾರ್ಯದರ್ಶಿ ಜಿಮ್ಮಿ ಜೋಸ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಪ್ರಸ್ತುತ ಪಡನ್ನಕ್ಕಾಡಿನಲ್ಲಿ ವಾಸಿಸುತ್ತಿದ್ದ ಅಸ್ಸಾಂ ಮೂಲದವರಾದ ರೌಫಿಕುಲ್ ಇಸ್ಲಾಂ (41), ನಬಿಪರಮಾಣಿಕ್ (45) ಮತ್ತು ಅಲ್ ಜಾಫಿದುಲ್ ಇಸ್ಲಾಂ (28) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ಹೊಸದುರ್ಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಳ್ಳರ ತಂಡವು ಬೇರೆ ಎಲ್ಲಿಯಾದರೂ ಇಂತಹ ಕೃತ್ಯಗಳನ್ನು ಎಸಗಿದೆಯೇ ಅಥವಾ ಈ ಜಾಲದಲ್ಲಿ ಇನ್ನೂ ಹೆಚ್ಚಿನವರು ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆಯನ್ನು ಮುಂದುವರಿಸಿದ್ದಾರೆ.