ಮಂಜೇಶ್ವರಂ: ಕುಂಬಳೆ ನಗರದಲ್ಲಿ ಹಾಡಹಗಲೇ ಯುವಕನನ್ನು ಅಪಹರಿಸಿ 18 ಲಕ್ಷ ರೂ.ಗೂ ಹೆಚ್ಚು ಮೊತ್ತದ ಹಣ ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಧರ್ಮದಡ್ಕ ಬಳಿಯ ಚಲ್ಲಂಗೈ ನಿವಾಸಿ ಯೂಸುಫ್ ಇರ್ಷಾದ್ (24) ಅವರನ್ನು ಬಂಧಿತ ಆರೋಪಿ.
ಇಚ್ಲಂಗೋಡಿನಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯೂಸುಫ್ ಇರ್ಷಾದ್ ರಾಜ್ಯದ ವಿವಿಧ ಭಾಗಗಳಿಂದ ಇದೇ ರೀತಿ ಸುಮಾರು 80 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮೇ 6 ರಂದು ಮಧ್ಯಾಹ್ನ ಕುಂಬಳೆಯಲ್ಲಿ ಈ ಘಟನೆ ನಡೆದಿತ್ತು. ಅಪಹರಣಕ್ಕೊಳಗಾದ ವ್ಯಕ್ತಿ ಮುಳಿಯತಡ್ಕ ನಿವಾಸಿ ಅಬ್ದುಲ್ ರಶೀದ್ (33).
ಕುಂಬಳೆ ನಗರದಲ್ಲಿ ನಿಂತಿದ್ದ ಅಬ್ದುಲ್ ರಶೀದ್ ಅವರನ್ನು ಫಾರ್ಚೂನರ್ ಕಾರಿನಲ್ಲಿ ತಂಡ ಬಲವಂತವಾಗಿ ಕರೆದೊಯ್ದಿದೆ. ಬಳಿಕ ಕಾರು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಬಳಿ ತಲುಪಿದಾಗ, ಕಾರನ್ನು ನಿಲ್ಲಿಸಿ ಇತರ ಇಬ್ಬರು ಕಾರಿನೊಳಗೆ ಸೇರಿದ್ದಾರೆ. ಕಾರು ಸಂಚರಿಸುತಿದ್ದಂತೆ ದೂರುದಾರನಿಗೆ ಹಿಗ್ಗಾ ಮಗ್ಗಾ ಥಳಿಸಿ ದೂರುದಾರರ ಸಂಸ್ಥೆಯ ಬ್ಯಾಂಕ್ ಖಾತೆಯಿಂದ 18,46,127 ರೂ.ಗಳನ್ನು ಎಗರಿಸಿದ್ದಾರೆ. ಬಳಿಕ ಅಬ್ದುಲ್ ರಶೀದ್ನನ್ನು ಸಂಜೆ 4:30 ರ ಸುಮಾರಿಗೆ ಪೆರ್ಮುದೆ ಆಟೋ ಸ್ಟ್ಯಾಂಡ್ನಲ್ಲಿ ಇಳಿಸಿ ತಂಡ ಪರಾರಿಯಾಗಿದೆ.ಇತರ ನಾಲ್ವರು ಆರೋಪಿಗಳನ್ನು ಮೊದಲೇ ಬಂಧಿಸಲಾಗಿತ್ತು