ಮಂಜೇಶ್ವರ: ಮಂಜೇಶ್ವರ ಕಣ್ಣೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮುಂಭಾಗದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾಗಿರುವ ಮಿನಿ ಹೈ ಮಾಸ್ಟ್ ಲೈಟ್ ವರ್ಷಗಳಾಗಿ ಸ್ಥಾಪನೆಯಾಗಿದ್ದು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ತಾಂತ್ರಿಕ ಕಾಮಗಾರಿಗಳು ಪೂರ್ಣಗೊಂಡಿರುವಂತೆಯೇ, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗದೇ ಇರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರದೇಶವಾಸಿಗಳ ಹೇಳಿಕೆಯಂತೆ ಈ ಲೈಟ್ ಯೋಜನೆಗೆ ಸುಮಾರು 2 ಲಕ್ಷ ರೂ. ವೆಚ್ಚವಾಗಿದ್ದು, ಬಹುತೇಕ ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದರೂ ಈಗಾಗಲೇ ಉದ್ಘಾಟನೆಯಿಲ್ಲದ ಕಾರಣ ಅದು ‘ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂಬಂತಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕರಿಗೆ ಇದರ ಪ್ರಯೋಜನವೇ ಸಿಗದಂತಾಗಿದೆ.
ಸ್ಥಳೀಯರು ಈ ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದು, ಮುಂಬರುವ ಸ್ಥಳೀಯ ಆಡಳಿತ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ಯೋಜನೆಯ ಉದ್ಘಾಟನೆಯನ್ನು ವಿಳಂಬಗೊಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸಮೀಪದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯದ ಪ್ರಕಾರ, “ಈ ಬೆಳಕು ಕಾಲೇಜು ಮತ್ತು ರಸ್ತೆಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಸುರಕ್ಷತೆ ಹೆಚ್ಚಿಸುವಲ್ಲಿ ಮಹತ್ತ್ವಪೂರ್ಣ ಪಾತ್ರ ವಹಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಜಕೀಯ ಲೆಕ್ಕಾಚಾರದಿಂದ ಇದು ಜನಸಾಮಾನ್ಯರ ಉಪಯೋಗಕ್ಕೆ ಬರದೆ ಇರುವುದೆ ದುಃಖಕರ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತು ಸ್ಥಳೀಯ ಆಡಳಿತ ಅಥವಾ ಕ್ಷೇತ್ರದ ಶಾಸಕರಿಂದ ಯಾವುದೇ ಸ್ಪಷ್ಟನೆ ಈ ತನಕ ಲಭಿಸಿಲ್ಲ.