ಮಂಜೇಶ್ವರ : ದೋಹಾ ಖತಾರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ತೂಮಿನಾಡು ನಿವಾಸಿಯಾಗಿರುವ ಯುವಕನೊಬ್ಬ ಬಾನುವಾರ ಖತಾರ್ ಸಮಯ 12.30 ಕ್ಕೆ ದಾರುಣವಾಗಿ ಸಾವನ್ನಪ್ಪಿದ್ದಾನೆ. ತೂಮಿನಾಡು ಹಿಲ್ ಟಾಪ್ ನಗರ ನಿವಾಸಿ ಅಬೂಬಕ್ಕರ್ (ಅಬ್ಬುಚ್ಚ) ಎಂಬವರ ಪುತ್ರ ಹಾರಿಸ್ (39) ಸಾವನ್ನಪ್ಪಿದ ದುರ್ದೈವಿ.
ದೋಹಾ ಖತಾರಿನಲ್ಲಿ ಟ್ಯಾಕ್ಸಿ ಚಲಾಯಿಸಿ ಜೀವನ ಸಾಗಿಸುತಿದ್ದ ಹಾರಿಸ್ ಕೆಲವು ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದಾನೆ. ಬಾನುವಾರದಂದು ಟ್ಯಾಕ್ಸಿ ಚಕ್ರ ಪಂಕ್ಚರ್ ಆಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಂಗಾಳಿ ಪ್ರಜೆಯೊಬ್ಬನ ಸಹಾಯದಿಂದ ಪಂಕ್ಚರ್ ಸರಿ ಮಾಡಿಸುತ್ತಿರುವ ಮಧ್ಯೆ ಆ ದಾರಿಯಾಗಿ ಬಂದ ಆಂಬ್ಯುಲೆನ್ಯೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಹಾರಿಸ್ ಹಾಗೂ ಜೊತೆಗಿದ್ದ ಬಂಗಾಳಿ ಪ್ರಜೆ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಎರಡೂ ಜೀವಗಳು ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಶವ ಶರೀರವನ್ನು ಊರಿಗೆ ತರಲು ಸಿದ್ಧತೆಗಳು ನಡೆಸುತ್ತಿರುವುದಾಗಿ ಕುಟುಂಬ ತಿಳಿಸಿದೆ.
ಒಂದು ಕೈಯಲ್ಲಿ ಮಾಡಿದ ದಾನ ಇನ್ನೊಂದು ಕೈಗೆ ತಿಳಿಯಬಾರದು ಎಂಬ ಮಾತನ್ನು ಜೀವಂತವಾಗಿಟ್ಟುಕೊಂಡಿದ್ದ ಹಾರಿಸ್ ಅಲ್ಪವಯಸ್ಸಲ್ಲಿಯೇ ದುರ್ಮರಣಕ್ಕೀಡಾಗಿರುವುದು ನಾಡಿನ ಜನತೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ತನ್ನ ಆದಾಯದ ಒಂದು ಭಾಗವನ್ನು ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಶಿಕ್ಷಣಕ್ಕೆ, ರೋಗಿಗಳಿಗೆ, ನಿರ್ಗತಿಕ ಕುಟುಂಬಗಳಿಗೆ ನಿಶಬ್ದವಾಗಿ ನೀಡುತ್ತಿದ್ದ ಹಾರಿಸ್ ತಾನು ಮಾಡಿದ ದಾನ ಧರ್ಮವನ್ನು ಯಾವೊಬ್ಬರಿಗೂ ಬಿಚ್ಚಿಡದೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಿಲ್ಲದೆ, ಬಲಹೀನರಿಗೆ ನೆರವಾಗುತ್ತಿದ್ದನೆಂದು ಊರವರು ಹೇಳುತಿದ್ದಾರೆ.