ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಎರಡೂ ದಿಕ್ಕುಗಳಿಗೆ ದಾಟಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಪಾದಾಚಾರಿ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿತು.
ಮೇಲ್ಸೇತುವೆ ನಿರ್ಮಾಣ ಸ್ಥಳದ ಬಗ್ಗೆ ಕೆಲವೊಂದು ಮಂದಿ ರೈಲು ನಿಲ್ದಾಣದ ಸಮೀಪ ಫ್ಲೈಓವರ್ ಬೇಕೆಂಬ ಬೇಡಿಕೆ ಇಟ್ಟಿದ್ದರೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರಿನವರು ಬೇಡಿಕೆ ಇಟ್ಟಿದ್ದ ಸ್ಥಳದಲ್ಲೇ ಇದೀಗ ಕಾಮಗಾರಿ ಆರಂಭಗೊಂಡಿರುವುದನ್ನು ಹೋರಾಟ ಕ್ರಿಯಾ ಸಮಿತಿ ಹಾಗೂ ಊರವರು ಸ್ವಾಗತಿಸಿದ್ದಾರೆ.
ಈ ಪಾದಾಚಾರಿ ಮೇಲ್ಸೇತುವೆ ನಿರ್ಮಾಣದಿಂದಾಗಿ ಜಂಕ್ಷನಿನಲ್ಲಿ ಇರುವ ವಾಹನ ದಟ್ಟನೆ ಸಮಸ್ಯೆ ದೂರವಾಗಿ, ಸಂಚಾರದ ಸುಗಮತೆಗೆ ದಾರಿಯೊಂದು ತೆರೆದುಕೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಗೋವಿಂದ ಪೈ ಸರ್ಕಾರಿ ಕಾಲೇಜು, ಕಣ್ಣೂರು ಕಾನೂನು ವಿಶ್ವವಿದ್ಯಾಲಯ ಎಂಬಿಡೆಗಳಿಗೆ ಸಾಗಲು ಆ ಭಾಗದಲ್ಲೂ ಒಂದು ಮೇಲ್ಸೇತುವೆಯನ್ನು ರೈಲು ನಿಲ್ದಾಣಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಮಾಡುವಂತೆಯೂ ಹೋರಾಟ ಸಮಿತಿ ಬೇಡಿಕೆ ಇಟ್ಟಿದೆ.
ಕೆಲವೊಂದು ಮಂದಿಯ ಒತ್ತಡದಿಂದ ಗೋವಿಂದ ಪೈ ಕಾಲೇಜು ಪರಿಸರದಲ್ಲಿ ಮಾಡಬೇಕೆಂಬ ನಿರ್ಣಯವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಬೋರ್ಡ್ ಸಭೆಯಲ್ಲಿ ಅಂಗೀಕರಿಸಲಾಗಿದ್ದರೂ ಇದಕ್ಕೆ ಊರವರ ಭಾಗದಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ ಈಗಿನ ಸ್ಥಳವನ್ನೇ ಆಯ್ಕೆ ಮಾಡಲಾಗಿತ್ತು.