ಮಂಗಳೂರು : ಲಯನ್ಸ್ ಜಿಲ್ಲೆ 317D, ಪ್ರಾಂತ್ಯ III, ಪ್ರಾಂತೀಯ ಸಮ್ಮೇಳನ ‘ಪರಿಕ್ರಮ’ ಸಮಾರಂಭವು ಜನವರಿ 24ರಂದು ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಇವರ ಆತಿಥ್ಯದಲ್ಲಿ ನಗರದ ಸುಲ್ತಾನ್ ಬತ್ತೇರಿ ಬಳಿ ಇರುವ ಸ್ವಸ್ತಿಕಾ ವಾಟರ್ ಫಂಟ್ ಇಲ್ಲಿ ಸಂಜೆ 3:30 ರಿಂದ ನಡೆಯಲಿದೆ ಎಂದು ಪ್ರಾಂತ್ಯ IIIರ ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ಅರವಿಂದ ರಾವ್ ಕೇದಿಗೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ 200ಕ್ಕೂ ಹೆಚ್ಚು ದೇಶಗಳಲ್ಲಿ 1.4 ಮಿಲಿಯನ್ ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯಾಗಿದೆ ಮತ್ತು ಮಾನವೀಯ ಸೇವೆಗೆ ಸದಾ ಬದ್ಧವಾಗಿದೆ. ಈ ಸಮ್ಮೇಳನದಲ್ಲಿ ಸುಮಾರು 500ಕ್ಕೂ ಹೆಚ್ಚು ಲಯನ್ಸ್ ಕ್ಲಬ್ ಸದಸ್ಯರು, ಲಯನ್ಸ್ ಜಿಲ್ಲಾ ಪದಾಧಿಕಾರಿಗಳು ಹಾಗೂ ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಪ್ರಾಂತ್ಯದ ಪ್ರಥಮ ಲಯನ್ ಡಾ. ಕೇದಿಗೆ ಅರವಿಂದ ರಾವ್ ಉದ್ಘಾಟಿಸಲಿದ್ದಾರೆ. ಪ್ರಾಂತ್ಯ IIIರ ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ಅರವಿಂದ ರಾವ್ (MJF) ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಗೀತಾ ಆರ್. ಶೆಟ್ಟಿ , ಡಾ. ಕೇದಿಗೆ ಅರವಿಂದ ರಾವ್, ಆಶಾ ರಾವ್ ಅರೂರು, ವಿನಯಾ.ಎಸ್. ಶೆಟ್ಟಿ, ನಿರ್ಮಲಾ ಪ್ರಮೋದ್ ಮತ್ತು ಪ್ರೀತಿ.ಎಸ್. ರೈ ಉಪಸ್ಥಿತರಿದ್ದರು