ನಗರದ ಚಿಲಿಂಬಿಯ ಮಹಾಲಕ್ಷ್ಮಿ ಕ್ಲಬ್ ಬಳಿಯ ಪರಿಸರದ ಡ್ರೈನೇಜ್ ಸಮಸ್ಯೆ ಕುರಿತು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ಸಭೆ ನಡೆಯಿತು.

ಈ ಪರಿಸರದಲ್ಲಿ ಅಗತ್ಯವಾಗಿ ಡ್ರೈನೇಜ್ ನಿರ್ಮಾಣವಾಗಬೇಕೆಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ. ಆ ನಿಟ್ಟಿನಲ್ಲಿ ಈ ಹಿಂದೆ ಅಧಿಕಾರಿಗಳಿಂದ ಸರ್ವೇ ನಡೆಸಿ ವರದಿ ಪಡೆಯಲಾಗಿತ್ತು. ಆದರೆ ಇಲ್ಲಿನ ಸ್ಥಳಾವಕಾಶದ ಕೊರತೆಯಿಂದ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಈಗ ಕೆಲವು ಸ್ಥಳೀಯರು ಡ್ರೈನೇಜ್ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವ ಬಗ್ಗೆ ಸ್ವತಃ ಒಲವು ತೋರಿದ್ದು, ಅದರಂತೆ ಮತ್ತೊಮ್ಮೆ ಎಲ್ಲರ ಆಶಯದಂತೆ ಸಭೆ ನಡೆಸಲಾಗಿದೆ. ಇಲ್ಲಿ ಪ್ರತಿಯೊಬ್ಬ ಸ್ಥಳೀಯರ ಅಭಿಪ್ರಾಯವೂ ಮುಖ್ಯವಾಗಿದ್ದು ಎಲ್ಲರ ಸಹಕಾರವಿದ್ದರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಶಾಸಕರು ಭರವಸೆ ನೀಡಿದರು.

ನಿಕಟಪೂರ್ವ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಸ್ಥಳೀಯ ಪ್ರಮುಖರಾದ ಸುರೇಶ್ ರಾವ್, ರಕ್ಷಿತ್ ಸಾಲ್ಯಾನ್, ಗಣೇಶ್ ಚಿಲಿಂಬಿ, ಚಂಚಲಾಕ್ಷಿ, ಪಾಲಿಕೆ ಉಪ ಆಯುಕ್ತರಾದ (ಅಭಿವೃದ್ಧಿ) ನರೇಶ್ ಶೆಣೈ, AEE ಶಿವಲಿಂಗಪ್ಪ, AE ಪ್ರಿಯಾಂಕ, ಕುಡ್ಸೆಂಪ್ ಅಧಿಕಾರಿಗಳಾದ ಜಯಪ್ರಕಾಶ್, ಸುರೇಶ್, ಶಿವರಾಮ್, ಸಂಪತ್, ವೆಂಕಟರಮಣ, ಮೊದಲಾದವರು ಉಪಸ್ಥಿತರಿದ್ದರು.

